ಹೊಸ ವರ್ಷಾಚರಣೆಯಂದೇ ಉಗ್ರರ ಅಟ್ಟಹಾಸ- ಯೋಧರಿಬ್ಬರು ಹುತಾತ್ಮ

Public TV
1 Min Read

ಶ್ರೀನಗರ: ಹೊಸ ವರ್ಷಾಚರಣೆ ಆರಂಭದಲ್ಲೇ ಪಾಕ್ ಗಡಿ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ ನೌಶೇರಾ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

ಉಗ್ರರ ತಾಣಗಳ ಮೇಲೆ ಯೋಧರು ನಡೆಸಿದ್ದ ಕಾರ್ಯಾಚರಣೆಯ ವೇಳೆ ಘಟನೆ ನಡೆದಿದ್ದು, ಸದ್ಯ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ನೌಶೇರಾ ಪ್ರದೇಶದ ಖಾರಿ ತ್ರಾಯತ್‍ನಲ್ಲಿ ಉಗ್ರರು ಪಾಕ್ ಆಕ್ರಮಿತ ಪ್ರದೇಶದಿಂದ ಭಾರತದೊಳಗೆ ನುಸುಳಲು ಯತ್ನಿಸಿದ್ದರು. ಈ ವೇಳೆ ಯೋಧರು ಕಾರ್ಯಾಚರಣೆ ನಡೆಸಿದ್ದರು.

ಘಟನೆ ಕುರಿತು ಮಾಹಿತಿ ನೀಡಿರುವ ಜಮ್ಮು ಮೂಲದ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಅವರು, ನೌಶೇರಾ ಸೆಕ್ಟರ್ ನಲ್ಲಿ ನಡೆದ ಶೋಧ ಕಾರ್ಯಾಚರಣೆಯ ವೇಳೆ ಇಬ್ಬರು ಸೇನಾ ಯೋಧರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

ಗಡಿ ಪ್ರದೇಶದೊಳಗೆ ನುಸುಳಿದ್ದ ಉಗ್ರರ ಗುಂಪನ್ನು ಭಾರತೀಯ ಸೇನಾ ಪಡೆ ಸುತ್ತುವರಿದಿತ್ತು. ಶೋಧ ಕಾರ್ಯಾಚರಣೆ ಆರಂಭಿಸಿದ ಕೂಡಲೇ ಒಳನುಸುಳುಕೋರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬೃಹತ್ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *