ಪಂಜಾಬ್ & ಕಾಶ್ಮೀರದಲ್ಲಿ 2 IED ಪತ್ತೆ – ಭದ್ರತಾ ಪಡೆಗಳಿಂದ ನಿಷ್ಕ್ರಿಯ

2 Min Read

ಶ್ರೀನಗರ: ಪಂಜಾಬ್ (Punjab) ಮತ್ತು ಕಾಶ್ಮೀರದಲ್ಲಿ (Kashmir) 2 ಐಇಡಿಗಳು ಪತ್ತೆಯಾಗಿವೆ. ಅಮೃತಸರದ ರಯಾ ಪೊಲೀಸ್ ಠಾಣೆ ಬಳಿ ಅನುಮಾನಾಸ್ಪದ ಚೀಲದಲ್ಲಿ ಐಇಡಿ ಪತ್ತೆಯಾಗಿದೆ.

ಅನುಮಾನಾಸ್ಪದ ವಸ್ತು ಪತ್ತೆಯಾದ ನಂತರ ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಸಿಬ್ಬಂದಿ ಅದನ್ನು ಐಇಡಿ ಎಂದು ದೃಢಪಡಿಸಿದರು. ನಂತರ ಅದನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಎಸ್‌ಎಸ್‌ಪಿ ಸೊಹೈಲ್ ಖಾಸಿಂ ಮಿರ್ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಕೆಂಪು ಕೋಟೆ, ಪ್ರಮುಖ ಧಾರ್ಮಿಕ ಸ್ಥಳಗಳ ಸ್ಫೋಟಕ್ಕೆ ಎಲ್‌ಇಟಿ ಸಂಚು

ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಸಫಾಪೋರಾದಲ್ಲಿ ಮತ್ತೊಂದು ಐಇಡಿ ಪತ್ತೆಯಾಗಿದೆ. ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಬಾಂಬ್ ಪತ್ತೆ ದಳ ಐಇಡಿಯನ್ನು ಪತ್ತೆಹಚ್ಚಿ ಅದನ್ನು ನಿಷ್ಕ್ರಿಯಗೊಳಿಸಿದೆ. ಈ ಎರಡೂ ಸ್ಫೋಟಕಗಳು ಫೆ.20 ರಂದು ಪತ್ತೆಯಾಗಿವೆ. ಇನ್ನೂ ಉತ್ತರ ಕಾಶ್ಮೀರದಲ್ಲಿ ಇತ್ತೀಚೆಗೆ ಪತ್ತೆಯಾದ ಮೂರನೇ ಐಇಡಿ ಇದಾಗಿದೆ. ಗುರುವಾರ ತಂಗ್‌ಮರಾಗ್ ರಸ್ತೆಯಲ್ಲಿ ಮತ್ತು ಬಾರಾಮುಲ್ಲಾದಲ್ಲಿ ಒಂದು ಐಇಡಿ ಪತ್ತೆಯಾಗಿತ್ತು.

ಲಷ್ಕರ್ ಉಗ್ರರ ದಾಳಿ ಎಚ್ಚರಿಕೆ
ದೆಹಲಿಯ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ಲಷ್ಕರ್ ಉಗ್ರರು (Lashkare Taiba) ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಗುಪ್ತಚರ ಮೂಲಗಳ ಪ್ರಕಾರ, ಕೆಂಪು ಕೋಟೆ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಚಾಂದನಿ ಚೌಕ್‌ನ ಕೆಲವು ಭಾಗಗಳು ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಕಣ್ಗಾವಲಿನಲ್ಲಿವೆ.

ಈ ಗುಂಪು ಸುಧಾರಿತ ಸ್ಫೋಟಕ (ಐಇಡಿ) ಮೂಲಕ ದಾಳಿಗೆ ಸಂಚು ರೂಪಿಸುತ್ತಿರಬಹುದು ಮತ್ತು ಚಾಂದಿನಿ ಚೌಕ್ ಪ್ರದೇಶದಲ್ಲಿರುವ ದೇವಾಲಯವು ಸಂಭಾವ್ಯ ಗುರಿಯಾಗಿರಬಹುದು ಎಂದು ಎಚ್ಚರಿಸಿದೆ. ಫೆಬ್ರವರಿ 6 ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳಲು ಈ ಸಂಘಟನೆ ಪ್ರಯತ್ನಿಸುತ್ತಿದೆ ಮತ್ತು ಭಾರತದಲ್ಲಿ ದೊಡ್ಡ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಮೂಲಗಳು ಸೂಚಿಸಿವೆ. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಕಚ್ಚಾ ಬಾಂಬ್ ತಯಾರಿಸ್ತಿದ್ದಾಗಲೇ ಬ್ಲಾಸ್ಟ್ – ಇಬ್ಬರು ಸಾವು

Share This Article