ಮಂಡ್ಯ: ಕೃಷಿ ಹೊಂಡದೊಳಗೆ ಬಿದ್ದು ಹೊರಬಾರದೇ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. 18 ವರ್ಷದ ಚಂದನ್ ಮತ್ತು 12 ವರ್ಷದ ಕಿರಣ್ ಮೃತ ದುದೈರ್ವಿಗಳು. ಇವರಿಬ್ಬರು ಜಮೀನಿನಲ್ಲಿ ಟೊಮ್ಯಾಟೊ ಬಿಡಿಸಿದ್ದಾರೆ. ನಂತರ ಕಿರಣ್ ಕೈ ಕಾಲು ತೊಳೆಯಲು ಕೃಷಿ ಹೊಂಡದ ಬಳಿ ಹೋಗಿದ್ದಾನೆ. ಆದ್ರೆ ಈ ವೇಳೆ ಕಾಲು ಜಾರಿ ಕೃಷಿಹೊಂಡದೊಳಗೆ ಬಿದ್ದಿದ್ದಾನೆ. ಇದನ್ನ ಗಮನಿಸಿದ ಚಂದನ್, ಕಿರಣ್ನನ್ನು ರಕ್ಷಿಸಲು ಹೋಗಿ ಕಾಲು ಜಾರಿ ಆತನೂ ಕೂಡ ಒಳಗೆ ಬಿದ್ದಿದ್ದಾನೆ.
ಇಬ್ಬರೂ ಈಜಲು ಬಾರದೇ ನೀರಿನೊಳಗೆ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಶವವನ್ನು ಮದ್ದೂರು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಆಸ್ಪತ್ರೆಯ ಬಳಿ ಮೃತರ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.