ಚಿಕ್ಕಬಳ್ಳಾಪುರ: ಆಷಾಢ ಮಾಸ ಕಳೆದು ಶ್ರಾವಣ ಮಾಸ (Shravan Maas) ಬಂದಿದೆ. ಮುಂದೆ ಸಾಲು ಸಾಲು ಹಬ್ಬಗಳ ಸರದಿ. ಅದ್ರಲ್ಲೂ ಹೂ ಹಣ್ಣು ಕಾಯಿಗೆ ಭಾರೀ ಡಿಮ್ಯಾಂಡ್ ಆಗೋ ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ.
ಇದ್ರಿಂದ ಈಗಲೇ ಮಾರುಕಟ್ಟೆಯಲ್ಲಿ (Market) ಏಲಕ್ಕಿ ಬಾಳೆಹಣ್ಣು ದರ ಕೇಳೀ ಗ್ರಾಹಕರು ಸುಸ್ತಾಗುವಂತಾಗಿದೆ. ಹೌದು ಶ್ರಾವಣ ಮಾಸ ಬಂದಿದ್ದೇ ತಡ, ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ ಸೇರಿದಂತೆ ಶುಭಕಾರ್ಯಗಳು ಆರಂಭವಾಗಿವೆ. ಇನ್ನು ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜೆ, ಪುನಸ್ಕಾರಗಳಿಂದ ಮದುವೆ ಮನೆಯವರೆಗೂ ಬಾಳೆಹಣ್ಣು (Banana) ಬೇಕೇಬೇಕು. ಇದರಿಂದ ಏಲಕ್ಕಿ ಬಾಳೆಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಆಷಾಢ ಮಾಸದಲ್ಲಿ ಕೆಜಿ ಏಲಕ್ಕಿ ಬಾಳೆಹಣ್ಣಿಗೆ 30 ರಿಂದ 40 ರೂಪಾಯಿ ಬೆಲೆಯಿತ್ತು. ಆದ್ರೆ ಶ್ರಾವಣ ಆರಂಭವಾಗುತ್ತಿದ್ದಂತೆ ಕೆಜಿ ಯಾಲಕ್ಕಿ ಬಾಳೆಹಣ್ಣು 100 ರಿಂದ 130 ರೂಪಾಯಿಯವರೆಗೂ ಏರಿಕೆಯಾಗಿದೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್- ದಲಿತ ಸಚಿವರು, ಶಾಸಕರ ಒಗ್ಗಟ್ಟಿಗೆ ಪರಮೇಶ್ವರ್ ಕರೆ
ಏಲಕ್ಕಿ ಬಾಳೆಹಣ್ಣಿಗೆ ಭಾರೀ ಡಿಮ್ಯಾಂಡ್..
ಇನ್ನು ಚಿಕ್ಕಬಳ್ಳಾಪುರ, ಮಂಚೇನಹಳ್ಳಿ, ಗೌರಿಬಿದನೂರು ಭಾಗದಲ್ಲಿ ಯಥೇಚ್ಛವಾಗಿ ಯಾಲಕ್ಕಿ ಬಾಳೆ ಬೆಳೆಯಲಾಗುತ್ತಿದೆ. ಕಳೆದ ಆಷಾಢ ಮಾಸದಲ್ಲಿ ವಿಪರೀತ ಗಾಳಿ ಬೀಸಿ ಕೆಲವು ತೋಟಗಳು ನಾಶವಾಗಿವೆ. ಅಳಿದುಳಿದ ಬಾಳೆತೋಟಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರಿನ ಹಾಪ್ ಕಾಮ್ಸ್ ನಲ್ಲೇ ರೈತರು ಬೆಳೆದ ಏಲಕ್ಕಿ ಬಾಳೆಗೆ ಕೆಜಿಗೆ 87 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ 130 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಇದರಿಂದ ಬಾಳೆಹಣ್ಣು ವರ್ತಕರು ಬಾಳೆಕಾಯಿಗಾಗಿ ರೈತರ ತೋಟಗಳಿಗೆ ಮುಗಿಬಿದ್ದಿದ್ದಾರೆ. ಕೆಜಿ ಬಾಳೆಕಾಯಿಗೆ 90 ರೂಪಾಯಿ ಕೊಡ್ತೀನಿ ಕೊಡಿ ಅಂದ್ರು ಯಾರು ಕೊಡುತ್ತಿಲ್ಲ. ಈಗಲೇ ಹೀಗಾದ್ರೆ ಮುಂದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಏನ್ ಮಾಡೋದು ಅಂತಾರೆ ಗ್ರಾಹಕರು.
ರೈತರಲ್ಲಿ ಹರ್ಷ, ಗ್ರಾಹಕರ ಜೇಬಿಗೆ ಕತ್ತರಿ
ಒಂದಡೆ ಶ್ರಾವಣ ಮಾಸ, ಮತ್ತೊಂದೆಡೆ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರೈತರು ಸದ್ಯ ಬಾಳೆ ತೋಟ ಮಾರುತ್ತಿಲ್ಲ. ಇದರಿಂದ ಏಲಕ್ಕಿ ಬಾಳೆಗೆ ಚಿನ್ನದ ಬೆಲೆ ಬಂದಿದ್ದು, ಬಾಳೆಹಣ್ಣು ಬೆಳೆದವನೇ ಶ್ರೀಮಂತ ಎನ್ನುವಂತಾಗಿದೆ. ಆದ್ರೆ ಗ್ರಾಹಕರ ಜೇಬಿಗೆ ಕತ್ತರಿಯಂತೂ ಬೀಳುತ್ತಿದೆ. ಇದನ್ನೂ ಓದಿ: ಕಲಬುರಗಿ ಕರ್ನಾಟಕ ಕೇಂದ್ರಿಯ ವಿವಿ ವಿದ್ಯಾರ್ಥಿನಿ ಕೆನ್ನೆಗೆ ಮುತ್ತಿಟ್ಟ ಕ್ಯಾಂಟೀನ್ ಓನರ್