ಮಂಡ್ಯ| ಹುಟ್ಟುಹಬ್ಬದ ಮಾರನೇ ದಿನವೇ 19 ವರ್ಷದ ಯುವಕನ ಕೊಲೆ

1 Min Read

ಮಂಡ್ಯ: ಹುಟ್ಟುಹಬ್ಬದ ಮಾರನೇ ದಿನವೇ 19 ವರ್ಷದ ಯುವಕನನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರಿನಲ್ಲಿ (Maddur) ನಡೆದಿದೆ.

ನಿನ್ನೆ ತಡರಾತ್ರಿ ಮದ್ದೂರಿನ ಕೊಲ್ಲಿ ವೃತ್ತದ ಸೌದೆ ಡಿಪೋ ಒಂದರ ಬಳಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ವೇಳೆ ಯಶ್ವಂತ್, ಸಚಿನ್ ಹಾಗೂ ದರ್ಶನ್ ಎಂಬ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಯಶ್ವಂತ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಉಳಿದ ಸಚಿನ್ ಹಾಗೂ ದರ್ಶನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಮದುವೆಗೆ ಬಂದಿದ್ದ ಯುವಕ ಭದ್ರಾ ನದಿಯಲ್ಲಿ ಮುಳುಗಿ ಸಾವು

ಮೃತ ಯಶ್ವಂತ್ ಮದ್ದೂರಿನ ಮರಳಿಗ ಗ್ರಾಮದವ. ಆತನಿಗೆ 19 ವರ್ಷ ವಯಸ್ಸು. ವಯಸ್ಸು ಚಿಕ್ಕದಾದರೂ ಫೀಲ್ಡಲ್ಲಿ ಹವಾ ಸೃಷ್ಟಿ ಮಾಡೋ ಕನಸು ಕಂಡಿದ್ದ ಯಶ್ವಂತ್ ರೌಡಿಶೀಟರ್ ಆಗಿದ್ದ. ಅಪ್ಪ-ಅಮ್ಮ ಎಷ್ಟು ಹೇಳಿದರೂ ಕೇಳದೆ ಪುಂಡರ ಸಹವಾಸ ಮಾಡಿದ್ದ.

ಯಶ್ವಂತ್ ಉಪಟಳ ಹೆಚ್ಚಾಗುತ್ತಿದ್ದಂತೆ ಮದ್ದೂರು ಪೊಲೀಸರು ಆತನನ್ನು ಗಡಿಪಾರು ಮಾಡಿದ್ದರು. ಬಳಿಕ ಯಶ್ವಂತ್ ಮದ್ದೂರು ತೊರೆದು 6 ತಿಂಗಳ ಕಾಲ ಬೆಂಗಳೂರು ಸೇರಿದ್ದ. ಆದರೆ, ಈ ನಡುವೆ ಸಂಬಂಧಿಕರೊಬ್ಬರ ಮದುವೆ ಇದ್ದ ಹಿನ್ನೆಲೆ ಗ್ರಾಮಕ್ಕೆ ಮರಳಿ ಅಲ್ಲೇ ಓಡಾಡಿಕೊಂಡಿದ್ದ. ಹೀಗಿರುವಾಗ ನಿನ್ನೆ ಹಳೆ ಗಲಾಟೆಯ ರಾಜಿ ಪಂಚಾಯ್ತಿಯ ಬುಲಾವ್ ಬಂದಿತ್ತು. ಇದರ ರಾಜಿಗೆ ಹೋದ ಯಶ್ವಂತ್ ಹೆಣವಾಗಿದ್ದಾನೆ. ಇದನ್ನೂ ಓದಿ: ಪತ್ನಿ ಆತ್ಮಹತ್ಯೆ ಸುದ್ದಿ ತಿಳಿದು ಆಘಾತ – ಗಡಿಬಿಡಿಯಲ್ಲಿ ಬರುವಾಗ ಅಪಘಾತದಲ್ಲಿ ಪತಿಯೂ ಸಾವು

ಘಟನೆ ಬಳಿಕ ಸ್ಥಳಕ್ಕೆ ತೆರಳಿದ ಮದ್ದೂರು ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಇತ್ತ ಮಂಡ್ಯ ಮಿಮ್ಸ್‌ನಲ್ಲಿ ಯಶ್ವಂತ್ ಮರೋಣೋತ್ತರ ಪರೀಕ್ಷೆ ನಡೆದಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ಆದರೆ, ಮಗನ ಸಾವಿಗೆ ಯಶ್ವಂತ್ ಕುಟುಂಬ ಕಣ್ಣೀರು ಹಾಕುತ್ತಿದೆ.

Share This Article