ಸ್ನೇಹಿತರಿಗೆಲ್ಲಾ ವಾಟ್ಸಪ್ ಮಾಡಿ 18ನೇ ಮಹಡಿಯಿಂದ ಜಿಗಿದು 19 ವರ್ಷದ ಯುವಕ ಆತ್ಮಹತ್ಯೆ

Public TV
1 Min Read

ಬೆಂಗಳೂರು: 18ನೇ ಮಹಡಿಯಿಂದ ಜಿಗಿದು 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಐಟಿಪಿಎಲ್ ಸಮೀಪದ ಪ್ರೆಸ್ಟೀಜ್ ಶಾಂತಿನಿಕೇತನ್‍ನಲ್ಲಿ ನಡೆದಿದೆ.

ಪೋಲ್ಲಾಸ್ ಚೌದರಿ(19) ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪ್ರವೀಣ್ ಚೌದರಿ ಎಂಬುವವರ ಪುತ್ರನಾಗಿದ್ದು, ಬೆಂಗಳೂರು ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ. ಪೋಲ್ಲಾಸ್ ಚೌದರಿ ತನ್ನ ತಂದೆ ಜೊತೆ ರಾಮಗೊಂಡಹಳ್ಳಿಯ ಖಾಸಗಿ ವಿಲ್ಲಾದಲ್ಲಿ ವಾಸವಿದ್ದ.

ಕಳೆದ ರಾತ್ರಿ ಪೋಲ್ಲಾಸ್ ಚೌದರಿ ತನ್ನ ಖಾಸಗಿ ವಿಲ್ಲಾದಿಂದ ಶಾಂತಿನಿಕೇತನ್ ಅಪಾಟ್ರ್ಮೆಂಟ್‍ನಲ್ಲಿ ಇರುವ ತನ್ನ ಸ್ನೇಹಿತೆ ಮನೆಗೆ ಹೋಗಿದ್ದ. ತನ್ನ ಸ್ನೇಹಿತೆಗೆ ಫೋನ್ ಮಾಡಿ ಅಪಾರ್ಟ್‍ಮೆಂಟ್ ಒಳಗೆ ಬಿಡುವಂತೆ ಸೆಕ್ಯುರಿಟಿಗೆ ಹೇಳು ಎಂದು ಹೇಳಿದ್ದಾನೆ. ಸೆಕ್ಯುರಿಟಿ ಗಾರ್ಡ್ ಬಳಿ ಎಂಟ್ರಿ ಮಾಡಿದ ಪೋಲ್ಲಾಸ್ ನೇರವಾಗಿ 18ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿಂದ ಬೆಳಗಿನ ಜಾವ ಸುಮಾರು 6ಗಂಟೆಗೆ ಟೆರೇಸ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಪೊಲ್ಲಾಸ್ ತನ್ನೆಲ್ಲಾ ಸ್ನೇಹಿತರಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದ.

ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಕುಟುಂಬ ವರ್ಗದವರು ಹಾಗೂ ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ. ಪೋಲ್ಲಾಸ್ ಚೌದರಿ ತನ್ನ ತಂದೆ ಜೊತೆ ವೈಟ್‍ಫೀಲ್ಡ್ ಫೊರಂ ಬಳಿ ಇರುವ ಆದರ್ಶ ಪಾಮ್‍ಮೇಡ್ಸ್ ವಿಲ್ಲಾದಲ್ಲಿ ವಾಸಿಸುತ್ತಿದ್ದ. ಪ್ರವೀಣ್ ಚೌದರಿ ವರ್ಷಕ್ಕೆ 10 ಲಕ್ಷ ರೂ. ಖರ್ಚು ಮಾಡಿ ತನ್ನ ಮಗ ಪೊಲ್ಲಾಸ್ ಚೌದರಿಯನ್ನು ಓದಿಸುತ್ತಿದ್ದರು. ಪೋಲಾಸ್ ಮಂಗಳವಾರ ಮಧ್ಯಾಹ್ನದಿಂದ ಸಾಯುವವರೆಗೂ ಸುಮಾರು 80 ಜನರಿಗೆ ಸಂದೇಶ ಕಳುಹಿಸಿದ್ದಾನೆ ಹಾಗೂ ಮಾತನಾಡಿದ್ದಾನೆ ಎಂದು ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *