ಜಾರ್ಖಂಡ್‍ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

Public TV
2 Min Read

ರಾಂಚಿ: ಜಾರ್ಖಂಡ್‍ನ ಪಾಕುರ್ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಬಸ್ ಹಾಗೂ ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ ಮತ್ತು 26 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಈ ಘಟನೆ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಗೋವಿಂದಪುರ-ಸಾಹಿಬ್‍ಗಂಜ್ ರಾಜ್ಯ ಹೆದ್ದಾರಿಯಲ್ಲಿ ನಡೆದಿದ್ದು, ಬಸ್‍ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಸಾಹಿಬ್‍ಗಂಜ್‍ನ ಬರ್ಹರ್ವಾದಿಂದ ದಿಯೋಘರ್ ಜಿಲ್ಲೆಯ ಜಸಿದಿಹ್‍ಗೆ ತೆರಳುತ್ತಿದ್ದರು. ಇದನ್ನೂ ಓದಿ: ಲಾರಿ, ಬಸ್ ಮುಖಾಮುಖಿ ಡಿಕ್ಕಿ- 6 ಮಂದಿ ಸ್ಥಳದಲ್ಲೇ ಸಾವು

ಅಪಘಾತದಲ್ಲಿ ಬಸ್‍ನಲ್ಲಿ ಸಿಲುಕಿದ್ದ ಹಲವಾರನ್ನು ರಕ್ಷಿಸಲಾಗಿದ್ದು, ಅದೃಷ್ಟವಶಾತ್ ಟ್ರಕ್‍ನಲ್ಲಿದ್ದ ಯಾವುದೇ  ಸಿಲಿಂಡರ್‌ಗಳು ಸ್ಫೋಟಗೊಂಡಿಲ್ಲ. ಇನ್ನು ದಟ್ಟ ಮಂಜಿನ ವಾತವಾರಣದಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಇದೀಗ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಜಿಲ್ಲಾಡಳಿತ ತಲಾ 1 ಲಕ್ಷ ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಆದರೆ ಗಾಯಗೊಂಡವರ ಸಂಖ್ಯೆ 26 ಆಗಿದೆ. ಅವರಲ್ಲಿ ಕನಿಷ್ಠ ಮೂವರು ಗಂಭೀರವಾಗು ಗಾಯಗೊಂಡಿದ್ದಾರೆ ಎಂದು ಪಾಕುರ್ ಆರ್‍ಡಿ ಪಾಸ್ವಾನ್‍ನ ಸಿವಿಲ್ ಸರ್ಜನ್ ಎಂದಿದ್ದಾರೆ.

ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಜಾರ್ಖಂಡ್‍ನ ಪಾಕುರ್‌ನಲ್ಲಿ ಸಂಭವಿಸಿದ ಅಪಘಾತ ಬಹಳ ಬೇಸರ ತರಿಸಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿಯೇ ಚೇತರಿಸಿಕೊಳ್ಳಲಿ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುತ್ತದೆ ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಾಗುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *