ಗಗನಯಾತ್ರಿ ಶುಭಾಂಶು ಜೊತೆಗೆ ಮೋದಿ ಸಂವಾದ – 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡ್ತಿದ್ದೇವೆ ಎಂದ ಶುಕ್ಲಾ

Public TV
3 Min Read

– ಭಾರತ ಬಹಳ ಅದ್ಭುತವಾಗಿ ಕಾಣುತ್ತೆ
– ಧ್ಯಾನ ಇಲ್ಲಿ ಬಹಳ ಮುಖ್ಯ, ಮುಂದಿನ ಸವಾಲು ಎದುರಿಸಬಹುದು
– ಪ್ರಧಾನಿ ಮೋದಿಗೆ ಇಂಚಿಂಚೂ ವಿವರ ನೀಡಿದ ಶುಭಾಂಶು ಶುಕ್ಲಾ

ನವದೆಹಲಿ: ಆಕ್ಸಿಯಂ-4 ಮಿಷನ್‌ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ್ದಾರೆ.

ಸುಮಾರು 18 ನಿಮಿಷಗಳ ಕಾಲ ಮಾತುಕತೆ ನಡೆಸಿದ ಪ್ರಧಾನಿ ಮೋದಿ-ಶುಕ್ಲಾ (Shubhanshu Shukla), ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲಿಗೆ ಮಾತು ಆರಂಭಿಸಿದ ಪ್ರಧಾನಿ ಮೋದಿ ನನ್ನ ಮಾತಿನ ಜೊತೆಗೆ 140 ಕೋಟಿ ಭಾರತೀಯರ ಭಾವನೆ ಇದೆ. ಅವರ ಉತ್ಸಾಹ ಮತ್ತು ಕುತೂಹಲವೂ ಇದೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಶುಕ್ಲಾ, ದೇಶದ ಜನರು ಪ್ರೀತಿ, ಆರ್ಶಿವಾದದಿಂದ ನಾನು ಚೆನ್ನಾಗಿದ್ದೇನೆ. ಈ ಬಾಹ್ಯಕಾಶ ಯಾತ್ರೆ ನನ್ನದಲ್ಲ, ನನ್ನ ದೇಶದು. ನಿಮ್ಮ ನೇತೃತ್ವದ ಸರ್ಕಾರ ಕನಸುಗಳನ್ನು ಸಹಕಾರ ನೀಡಲು ಅವಕಾಶ ನೀಡುತ್ತದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

Shubhanshu Shukla 1

ಕ್ಯಾರೆಟ್‌ ಹಲ್ವಾ ನಿಮ್ಮ ಸ್ನೇಹಿತರಿಗೆ ನೀಡಿದ್ರಾ?
ಸದ್ಯ ಶುಕ್ಲಾ ಐಎಸ್‌ಎಸ್‌ಗೆ ಮೂರು ರೀತಿ ಭಾರತೀಯ ಭಕ್ಷ್ಯಗಳನ್ನು ಕೊಂಡೊಯ್ದಿದ್ದಾರೆ. ಮ್ಯಾಂಗೋ ಜ್ಯೂಸ್‌, ಹೆಸರು ಬೇಳೆ ಹಲ್ವಾ ಹಾಗೂ ಕ್ಯಾರೆಟ್‌ ಹಲ್ವಾ ಕೊಂಡೊಯ್ದಿದ್ದಾರೆ. ಇದನ್ನು ನೆನಪಿಸಿದ ಪ್ರಧಾನಿ ಮೋದಿ ಹಲ್ವಾ ತೆಗೆದುಕೊಂಡು ಹೊಗಿದ್ದೀರಿ, ನಿಮ್ಮ ಸ್ನೇಹಿತರಿಗೆ ನೀಡಿದ್ರಾ? ಅಂತ ಕೇಳಿದ್ರು, ಇದಕ್ಕೆ ವಿನಯದಿಂದಲೇ ಉತ್ತರಿಸಿದ ಶುಕ್ಲಾ, ಹೌದು ನಾನು ಹಲ್ವಾ, ಮಾವಿನ ರಸ (ಮ್ಯಾಂಗೋ ಜ್ಯೂಸ್‌), ಹೆಸರು ಬೇಳೆ ಹಲ್ವಾ ತಂದಿದ್ದೇನೆ. ಇಲ್ಲಿ ಎಲ್ರೂ ಒಟ್ಟಾಗಿ ಅದನ್ನ ತಿಂದ್ವಿ, ಎಲ್ಲರೂ ತುಂಬಾ ಖುಷಿ ಪಟ್ಟರು. ಇದನ್ನೂ ಓದಿ: ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

ಭಾರತ ಬಹಳ ಅದ್ಭುತವಾಗಿ ಕಾಣುತ್ತೆ
ಮುಂದುವರಿದು.. ಭೂಮಿಯ ಯಾವ ಭಾಗದ ಮೇಲೆ ಪ್ರಯಾಣ ಮಾಡ್ತಿದ್ದೀರಿ? ಅಂತ ಮೋದಿ ಕೇಳಿದ್ದಕ್ಕೆ ಈ ಕ್ಷಣದಲ್ಲಿ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗ್ತಿಲ್ಲ. ಆದರೆ ಈಗ ಪ್ರತಿ ಗಂಟೆಗೆ 18,000 ವೇಗದಲ್ಲಿ ಪ್ರಯಾಣ ಮಾಡುತ್ತಿದ್ದೇವೆ. 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುತ್ತಿದ್ದೇವೆ. ಭೂಮಿಗೆ ಯಾವುದೇ ಗಡಿ ಕಾಣುವುದಿಲ್ಲ. ಭಾರತ ಮ್ಯಾಪ್‌ನಲ್ಲಿ ನೋಡುವುದಕ್ಕಿಂತ ದೊಡ್ಡದಾಗಿ ಕಾಣುತ್ತೆ. ಭಾರತ ಬಹಳ ಅದ್ಭುತವಾಗಿ ಕಾಣುತ್ತೆ. ರಾಜ್ಯ ದೇಶಗಳ ಗಡಿ ಕಾಣಲ್ಲ ಅಂತ ತಮಗಾದ ಅನುಭವ ಹಂಚಿಕೊಂಡ್ರು.

International Space Station 1

ನಂತರ ಬಹಳ ತರಬೇತಿ ಪಡೆದು ಹೋಗಿದ್ದೀರಿ, ಅದಾಗ್ಯೂ ಈಗ ಪರಿಸ್ಥಿತಿ ಹೇಗಿದೆ? ಅಂತ ಕೇಳಿದ್ರು. ಇದಕ್ಕೆ ಉತ್ತರಿಸಿದ ಶುಕ್ಲಾ, ಇಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಸಾಕಷ್ಟು ಸಮಸ್ಯೆಯಾಗುತ್ತದೆ. ನಿಮ್ಮ ಜೊತೆಗೆ ಮಾತನಾಡುವಾಗ ಕಾಲನ್ನು ಕಟ್ಟಿಕೊಂಡಿದ್ದೇವೆ ಅಂತ ಮೈಕ್ ತೋರಿಸಿ ಗುರುತ್ವಾಕರ್ಷಣೆಯ ಬಗ್ಗೆ ವಿವರಣೆ ನೀಡಿದರು. ಇದನ್ನೂ ಓದಿ: ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

ಸಂವಾದ ಹೇಗಿತ್ತು? (ಪ್ರಶ್ನೋತ್ತರಗಳಲ್ಲಿ ನೋಡಿ…)
ಮೋದಿ: ಧ್ಯಾನ ಬಾಹ್ಯಾಕಾಶದಲ್ಲಿ ಉಪಯೋಗವಾಗುತ್ತದೆಯೇ?
ಶುಕ್ಲಾ: ನಾವು ಓಡುತ್ತಿದ್ದೇವೆ, ಅದರ ಸಣ್ಣ ಹೆಜ್ಜೆ ಈ ಪ್ರಯತ್ನ. ಮುಂದೆ ಭಾರತ ತನ್ನದೇಯಾದ ಬಾಹ್ಯಕಾಶ ಕೇಂದ್ರ ಹೊಂದಲಿದೆ. ಬಹಳಷ್ಟು ಜನರು ಇಲ್ಲಿಗೆ ಬರಲಿದ್ದಾರೆ. ಧ್ಯಾನ ಇಲ್ಲಿ ಬಹಳ ಮುಖ್ಯವಾಗುತ್ತದೆ. ಧ್ಯಾನದಿಂದ ಮುಂದಿನ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು.

ಮೋದಿ: ನಿಮ್ಮ ಪ್ರಯೋಗಗಳು ಹೇಗೆ ಸಾಗುತ್ತಿದೆ?
ಶುಕ್ಲಾ: ನಾವು ಇಲ್ಲಿ ಹಲವು ಪ್ರಯೋಗ ಮಾಡುತ್ತಿದ್ದೇವೆ. ಮೂಳೆ ಸವೆತದ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಮೊಳಕೆ ಕಾಳುಗಳ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದೇವೆ. ಭೂಮಿಯ ಮೇಲೆ ಸಾಕಷ್ಟು ನಿಧಾನವಾಗಿ ಸಿಗುವ ಪ್ರತಿಫಲ ಇಲ್ಲಿದೆ ವೇಗವಾಗಿ ಸಿಗುತ್ತದೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

ಮೋದಿ: ಯುವ ಜನತೆಗೆ ಏನು ಸಂದೇಶ ನೀಡುತ್ತೀರಿ?
ಶುಕ್ಲಾ: ನಾವು ದೊಡ್ಡ ಕನಸುಗಳೊಂದಿಗೆ ಓಡುತ್ತಿದ್ದೇವೆ. ಅದಕ್ಕೆ ನಿಮ್ಮಂಥವರ ಸಹಕಾರ ಬೇಕು. ಯಶಸ್ಸು ಸಿಗುವ ತನಕ ನಿರಂತರ ಪ್ರಯತ್ನ ಮಾಡಬೇಕು. ನಡುವೆ ಸೋಲು ಒಪ್ಪಿಕೊಳ್ಳಬಾರದು.

ಮೋದಿ: ಮಿಷನ್ ಗಗನ್ ಯಾನ್ ಮಾಡಬೇಕು, ಸ್ವತಃ ಬಾಹ್ಯಕಾಶ ಕೇಂದ್ರ ಹೊಂದಬೇಕು, ಗಗನಯಾತ್ರಿಗಳನ್ನು ಲ್ಯಾಂಡ್ ಮಾಡಬೇಕು. ನಿಮ್ಮ ಅನುಭವ ಬಹಳ ಮುಖ್ಯ, ನೀವು ಇದನ್ನು ದಾಖಲಿಸುತ್ತಿದ್ದೀರಾ?
ಶುಕ್ಲಾ: ನಾವು ಎಲ್ಲವನ್ನೂ ದಾಖಲಿಸುತ್ತಿದ್ದೇವೆ. ಗಗನಯಾನ್ ಸಾಧ್ಯವಾದಷ್ಟು ಬೇಗ ಈಡೇರಲಿದೆ.

ಸಂವಾದದ ಕೊನೆಯಲ್ಲಿ ಮಾತನಾಡುತ್ತಾ, ಇದು ಭಾರತದ ಗಗನಯಾನ್ ಯಶಸ್ಸಿನ ಮೊದಲ ಅಧ್ಯಾಯವಾಗಿದೆ. ವಿಕಸಿತ್ ಭಾರತಕ್ಕೆ ವೇಗ ಮತ್ತು ಶಕ್ತಿ ನೀಡಲಿದೆ. ಇದು ಬಾಹ್ಯಕಾಶದ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸಲಿದೆ ಎಂದರಲ್ಲದೇ ನಿಮ್ಮ ವಾಪಸ್ ಬರುವಿಕೆಯೂ ನಮ್ಮಗೆ ಬಹಳ ಮುಖ್ಯ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಕಿವಿಮಾತು ಹೇಳಿದರು.

Share This Article