– ಸಂಸತ್ತಿನಲ್ಲಿ ಮೊದಲ ದಿನವೇ `ಪಹಲ್ಗಾಮ್’ ಗದ್ದಲ
ನವದೆಹಲಿ: ಪಹಲ್ಗಾಮ್ ಉಗ್ರರದಾಳಿಗೆ ಪ್ರತೀಕಾರವಾಗಿ ಪಾಕ್ (Pakistan) ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪವಾಗಿ ಗದ್ದಲ-ಕೋಲಾಹಲದಿಂದಾಗಿ ಕಲಾಪವನ್ನು ಮಂಗಳವಾರಕ್ಕೆ (ಜು.22) ಮುಂದೂಡಲಾಗಿದೆ.
ಪಹಲ್ಗಾಮ್ ಉಗ್ರರ ದಾಳಿ (Pahalgam Attack) ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು. ಪ್ರಶ್ನೋತ್ತರ ಅವಧಿ ಬಳಿಕ ಅವಕಾಶ ಕೊಡ್ತೇವೆ ಅಂತ ಸ್ಪೀಕರ್ ಓಂಬಿರ್ಲಾ ಹೇಳಿದರೂ ವಿಪಕ್ಷಗಳ ಘೋಷಣೆ, ಗೋಜಲು ಹೆಚ್ಚಾಗಿ ಕಲಾಪವನ್ನು ಪದೇ ಪದೇ ಮುಂದೂಡಬೇಕಾಯಿತು. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು
ಇನ್ನೂ ಸಂಸತ್ ವ್ಯವಹಾರ ಸಲಹಾ ಸಮಿತಿಯು ʻಆಪರೇಷನ್ ಸಿಂಧೂರʼ (Operation Sindoor) ಕುರಿತು ಚರ್ಚೆ ನಡೆಸಲು ಮುಂದಿನವಾರ ಸಮಯ ನಿಗದಿ ಮಾಡಿದೆ. ವಿಪಕ್ಷಗಳ ಬಿಗಿ ಪಟ್ಟಿನ ಬಳಿಕ ಲೋಕಸಭೆಯಲ್ಲಿ 16 ಗಂಟೆ ಹಾಗೂ ರಾಜ್ಯಸಭೆಯಲ್ಲಿ 9 ಗಂಟೆಗಳ ಸಮಯವನ್ನ ಚರ್ಚೆಗೆ ನಿಗದಿ ಮಾಡಿರುವುದಾಗಿ ಘೋಷಿಸಿದೆ. ವಿಪಕ್ಷಗಳು ಈ ವಾರವೇ ಕಲಾಪದಲ್ಲಿ ಚರ್ಚೆ ನಡೆಸಬೇಕೆಂದು ಬಿಗಿ ಪಟ್ಟು ಹಿಡಿದಿದ್ದವು. ಆದ್ರೆ ಪ್ರಧಾನಿಯವರ ವಿದೇಶಿ ಪ್ರವಾಸದ ಹಿನ್ನೆಲೆ ಚರ್ಚೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಲಾಗಿದೆ.
ಕಳೆದ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾಗಿದೆ. ಅಲ್ಲದೇ ಆಪರೇಷನ್ ಸಿಂಧೂರ ವಿಪಕ್ಷಗಳು ಚರ್ಚೆಗೆ ಕೋರಿದ್ದ 8 ವಿಷಯಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಫಲಾನುಭವಿಗಳಲ್ಲಿ ಕರ್ನಾಟಕ ಮುಂಚೂಣಿ
ವಿಜಯೋತ್ಸವಕ್ಕಾಗಿ ಮುಂಗಾರು ಅಧಿವೇಶನ
ಇನ್ನೂ ಅಧಿವೇಶನಕ್ಕೂ ಮುನ್ನ ಮಾತನಾಡಿದ ಮೋದಿ, ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಶೇ.100ರಷ್ಟು ಗುರಿಯನ್ನು ಸಾಧಿಸಲಾಗಿದೆ. ಭಯೋತ್ಪಾದಕರ ನೆಲೆಗಳನ್ನು ಕೇವಲ 22 ನಿಮಿಷಗಳಲ್ಲಿ ನೆಲಸಮ ಮಾಡಲಾಗಿದೆ. ವಿಜಯೋತ್ಸವದ ಸಂಭ್ರಮಕ್ಕಾಗಿಯೇ ಈ ಮುಂಗಾರು ಅಧಿವೇಶನ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸದಸ್ಯರು ಈ ವಿಜಯೋತ್ಸವವನ್ನು ಆಚರಿಸುತ್ತಾರೆಂಬ ಭರವಸೆಯಿದೆ ಎಂದು ಹೇಳಿದರು. ಅಲ್ಲದೆ, ಇಡೀ ವಿಶ್ವವೇ ಭಾರತದ ಸೇನಾ ಶಕ್ತಿಯತ್ತ ಆಕರ್ಷಿತವಾಗಿವೆ. ನನ್ನ ವಿದೇಶಿ ಭೇಟಿಯಲ್ಲಿ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳ ಕಡೆಗೆ ಪ್ರಪಂಚ ಆಕರ್ಷಣೆಗೊಳಗಾಗಿರುವುದನ್ನು ಗಮನಿಸಿದ್ದೇನೆ ಅಂದರು.