ನವದೆಹಲಿ: ಮನೆ ಬಿಟ್ಟು ಹೋಗಿದ್ದ ಬಾಲಕ ಬರೋಬ್ಬರಿ 15 ತಿಂಗಳ ಬಳಿಕ ಪೋಷಕರ ಮಡಿಲು ಸೇರಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಪಾಟ್ನಾದ ಮ್ಯಾನರ್ ಪಟ್ಟಣದಲ್ಲಿರುವ ತನ್ನ ಮನೆಯಿಂದ 11 ವರ್ಷದ ಬಾಲಕ 2019ರ ಆಗಸ್ಟ್ 11ರಂದು ಹೊರ ಹೋಗಿದ್ದನು. ಬಾಲಕನ ಪತ್ತೆಗೆ ಪೋಷಕರು ಹುಡುಕಾಟ ಆರಂಭಿಸಿದ್ದರು. ಇದೀಗ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಹಾಯದಿಂದ ಆತನನ್ನು ಪತ್ತೆ ಹಚ್ಚಿದ್ದು, ಕುಟುಂಬದವರಿಗೆ ಆತನನ್ನು ಒಪ್ಪಿಸಲಾಗಿದೆ ಎಂದು ಹಿರಿಯ ಪೊಲಿಸ್ ಅಧಿಕಾರಿ ತಿಳಿಸಿದ್ದಾರೆ.
ಕಳೆದ 15 ತಿಂಗಳಿನಿಂದ ಪೂರ್ವ ದೆಹಲಿಯ ಗೀತಾ ಕಾಲೋನಿಯ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಬಾಲಕ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಇದೀಗ ಆತ ಮತ್ತೆ ತಮ್ಮ ಕೈ ಸೇರಿರುವುದು ಕಂಡು ಪೋಷಕರ ಖುಷಿಗೆ ಪಾರವೇ ಇರಲಿಲ್ಲ.
ಜನವರಿ 29 ರಂದು ರಾಷ್ಟ್ರ ರಾಜಧಾನಿಯಲ್ಲಿ ಕೃಷ್ಣ ನಗರ ಪ್ರದೇಶದ ಅನ್ವರ್ ಶಾಹಿದ್ ಎಂಬ ಯುವಕ ಬಾಲಕನನ್ನು ನೋಡಿದ್ದಾನೆ. ನಂತರ ಅನ್ವರ್, ಆ ಬಾಲಕನ ಫೋಟೋವನ್ನು ಕುಟುಂಬದ ಮಾಹಿತಿಯೊಂದಿಗೆ ಫೇಸ್ಬುಕ್ನಲ್ಲಿ ಹಂಚಿಕೊಂಡನು. ಅಲ್ಲದೆ ಹುಡುಗನನ್ನು ಆತನ ಹೆತ್ತವರೊಂದಿಗೆ ಮತ್ತೆ ಒಂದುಗೂಡಿಸಲು ಎಲ್ಲರು ಸಹಾಯ ಮಾಡುವಂತೆ ಕೋರಿದನು.
ಈ ಮಧ್ಯೆ ಬಾಲಕನ ಶಿಕ್ಷಕ ಅವನನ್ನು ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿದ್ದಾರೆ. ಅಲ್ಲದೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಮತ್ತು ಅವನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ನಾವು ಅನ್ವರ್ ಅವರ ಫೇಸ್ಬುಕ್ ಪೋಸ್ಟ್ ಅನ್ನು ಹುಡುಕಿದ್ದೇವೆ ಮತ್ತು ಹುಡುಗನನ್ನು ಗುರುತಿಸಿದ್ದೇವೆ. ಅವರ ಪೋಷಕರು ನಂತರ ತಮ್ಮ ಮಗನನ್ನು ಗುರುತಿಸಿದ್ದಾರೆ ಎಂದು ಮ್ಯಾನರ್ ಪೊಲೀಸ್ ಠಾಣೆಯ ಎಸ್ಎಚ್ಒ ಮಧುಸೂದನ್ ಕುಮಾರ್ ಹೇಳಿದರು.