ಹಾಸನ: ಆನೆ ದಾಳಿಗೆ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಕೊಡಗತ್ತವಳ್ಳಿ ಗ್ರಾಮದಲ್ಲಿ ನಡೆದಿದೆ.
8ನೇ ತರಗತಿ ಓದುತ್ತಿದ್ದ ಭರತ್ (14) ಮೃತ ದುರ್ದೈವಿ. ಭರತ್ ತಂದೆಯನ್ನು ಕಳೆದುಕೊಂಡಿದ್ದು, ಕೊಡಗತ್ತವಳ್ಳಿ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಸಂಕ್ರಾಂತಿ ಹಬ್ಬ ಆಚರಿಸಲು ಶನಿವಾರ ಬಂದಿದ್ದಾನೆ. ಇಂದು ಮುಂಜಾನೆ ಭರತ್ ಇತರೆ ಸ್ನೇಹಿತರೊಂದಿಗೆ ಮನೆ ಮುಂದೆ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ ಆನೆವೊಂದು ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಸ್ಥಳದಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಆನೆ ದಾಳಿಯಿಂದ ಎಲ್ಲಾ ಮಕ್ಕಳು ತಪ್ಪಿಸಿಕೊಂಡಿದ್ದಾರೆ. ಆದರೆ ಭರತ್ ನನ್ನು ಆನೆ ಎಳೆದೊಯ್ದು ಕೊಂದು ಹಾಕಿದೆ. ಈ ಘಟನೆ ಸಂಬಂಧ ಆಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.