14 ತಿಂಗಳ ಬಾಲಕನ ಹೃದಯ ದಾನದಿಂದ 3ರ ಬಾಲಕಿಗೆ ಮರುಜೀವ ಸಿಕ್ತು

Public TV
2 Min Read

ಅಹಮದಾಬಾದ್: ಮೆದುಳು ನಿಷ್ಕ್ರಿಯುಗೊಂಡಿದ್ದ 14 ತಿಂಗಳ ಪುಟ್ಟ ಮಗುವಿನ ಹೃದಯ ಹಾಗೂ ಕಿಡ್ನಿ ದಾನದಿಂದ ಎರಡು ಜೀವಗಳಿಗೆ ಮರುಜೀವ ಸಿಕ್ಕಂತಾಗಿದೆ. ಈ ಮೂಲಕ ಬಾಲಕ ಸೋಮನಾಥ್ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದಾನೆ.

ಮಂಗಳವಾರದಂದು ಸೋಮನಾಥ್‍ನ ಹೃದಯವನ್ನು ಮೂರುವರೆ ವರ್ಷದ ಬಾಲಕಿ ಆರಾಧ್ಯ ಮೂಲೆಗೆ ಜೋಡಿಸಲಾಗಿದೆ. ಆರಾಧ್ಯಗಾಗಿ ನಡೆದ ಸೇವ್ ಆರಾಧ್ಯ ಅಭಿಯಾನ ಇದೇ ವರ್ಷ ಮುಂಬೈ ಹಾಗೂ ಪುಣೆಯಲ್ಲಿ ಜನಪ್ರಿಯತೆ ಗಳಿಸಿತ್ತು.

ಸೋಮನಾಥ್ ಮೂಲತಃ ಬಿಹಾರದ ಸಿಸ್ವಾನ್ ಜಿಲ್ಲೆಯ ಮುಬಾರಕ್‍ಪುರ್ ಗ್ರಾಮದವನು. ಕೆಲವು ತಿಂಗಳ ಹಿಂದಷ್ಟೇ ತಂದೆ ಸುನಿಲ್ ಸೂರತ್‍ಗೆ ಬಂದು ನೆಲೆಸಿದ್ದು, ಪವರ್‍ಲೂಮ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ರು.

ಸೆಪ್ಟೆಂಬರ್ 2ರಂದು ಸಂಜೆ 7 ಗಂಟೆ ವೇಳೆಯಲ್ಲಿ ಸೋಮನಾಥ್ ತನ್ನ ಅಕ್ಕ ಕುಸುಮ್ ಜೊತೆ ಮನೆಯ ಬಳಿ ಆಟವಾಡುವಾಗ ಮಹಡಿಯಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿತ್ತು. ಸೋಮನಾಥ್‍ಗೆ ಪ್ರಜ್ಞೆ ಹೋಗಿತ್ತು. ಪೋಷಕರು ಕೂಡಲೇ ಆತನನ್ನು ವೈದ್ಯರೊಬ್ಬರ ಬಳಿ ಕೊಂಡೊಯ್ದಿದ್ದರು. ವೈದ್ಯರ ಸೂಚನೆಯಂತೆ ಸೂರತ್‍ನ ನ್ಯೂ ಸಿವಿಲ್ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದರು.

ಬಾಲಕನ ಮೆದುಳಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ತಲೆಬುರುಡೆಯ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ರು. ಸಮನಾಥ್‍ಗೆ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಭಾನುವಾರ ರಾತ್ರಿ ವೈದ್ಯರು ತಿಳಿಸಿದ್ರು. ನಂತರ ನಾವು ಆಸ್ಪತ್ರೆಗೆ ಹೋಗಿ ಪೋಷಕರಿಗೆ ಅಂಗಾಂಗ ದಾನದ ಬಗ್ಗೆ ವಿವರಿಸಿದೆವು ಎಂದು ಸೂರತ್‍ನ ಅಂಗಾಂಗ ದಾನ ಸಂಸ್ಥೆ ಡೊನೇಟ್ ಲೈಫ್‍ನ ಅಧ್ಯಕ್ಷ ನೀಲೇಶ್ ಹೇಳಿದ್ದಾರೆ.

ಕುಟುಂಬಸ್ಥರೊಂದಿಗೆ ಮಾತನಾಡಿದ ನಂತರ ಅವರು ಸೆಪ್ಟೆಂಬರ್ 4ರ ಸಂಜೆ ಅಂಗಾಂಗ ದಾನಕ್ಕೆ ಒಪ್ಪಿದ್ರು. ನಂತರ ನಾವು ಅಂಗಾಂಗ ಸ್ವೀಕರಿಸುವವರಿಗಾಗಿ ಹುಡುಕುವ ಪ್ರಕ್ರಿಯೆ ಶುರು ಮಾಡಿದೆವು ಎಂದು ಅವರು ಹೇಳಿದ್ರು.

ನಮ್ಮ ಮಗ ಮನೆಯ ವರಾಂಡಾದಲ್ಲಿ ಆಟವಾಡ್ತಿದ್ದ. ಮೆಟ್ಟಿಲಿನ ಮೇಲೆ ಹೋಗಿ ಅಲ್ಲಿಂದ ಕೆಳಗೆ ಬಿದ್ದ. ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಮೆದುಳು ನಿಷ್ಕ್ರಿಯಯಗೊಂಡಿರುವುದು ಗೊತ್ತಾಯಿತು. ನಮ್ಮ ಒಬ್ಬನೇ ಮಗ ಸೋಮನಾಥ್‍ನನ್ನು ಕಳೆದುಕೊಂಡು ನೋವಾಗಿದೆ. ಕೌನ್ಸೆಲರ್‍ಗಳು ನಮಗೆ ಅಂಗಾಗ ದಾನದ ಮಹತ್ವದ ಬಗ್ಗೆ ಹೇಳಿದ ಬಳಿಕ ಒಪ್ಪಿಕೊಂಡೆವು. ನಮ್ಮ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನಮ್ಮ ಮಗುವಿನಿಂದಾಗಿ ಮತ್ತೊಂದು ಮಗುವಿನ ಜೀವ ಉಳಿಯುತ್ತೆ ಅಂದ್ರೆ ಅದಕ್ಕಿಂತ ದೊಡ್ಡದು ಮತ್ತೊಂದಿಲ್ಲ ಅಂತ ಸೋಮನಾಥ್ ತಂದೆ ಸುನಿಲ್ ಹೇಳಿದ್ದಾರೆ.

ಸೋಮನಾಥ್ ಕಿಡ್ನಿಯನ್ನು ಅಹಮದಾಬಾದ್‍ನ ಇನ್ಸ್ ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸಸ್ ಅಂಡ್ ರಿಸರ್ಚ್ ಸೆಂಟರ್ (ಐಕೆಡಿಆರ್‍ಸಿ)ನಲ್ಲಿ ರೋಗಿಗೆ ಜೋಡಿಸಲಾಗುತ್ತದೆ.

ಸೋಮನಾಥ್ ಕಿಡ್ನಿ ಐಕೆಡಿಆರ್‍ಸಿ ತಲುಪಿದೆ. ನಾವು ಕಿಡ್ನಿಗೆ ಹೊಂದುವ ರೋಗಿಯನ್ನ ಹುಡುಕುತ್ತಿದ್ದೇವೆ. ಮಗುವಿನದ್ದು ತುಂಬಾ ಚಿಕ್ಕ ಕಿಡ್ನಿಗಳಾಗಿರುವುದರಿಂದ ಎರಡೂ ಕಿಡ್ನಿಯನ್ನ ಒಂದೇ ಮಗುವಿಗೆ ಜೋಡಿಸಬೇಕೆಂದಿದ್ದೇವೆ. ಕೂಡಲೇ ಈ ಪ್ರಕ್ರಿಯೆ ಆರಂಭಿಸುತ್ತೇವೆ. ನನಗೆ ಗೊತ್ತಿರುವ ಪ್ರಕಾರ ಸೋಮನಾಥ್ ನಮ್ಮ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂದು ಐಕೆಡಿಆರ್‍ಸಿಯ ಡಾ ಜಮಲ್ ರಿಸ್ವಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *