ಹಂದಿ ಜ್ವರಕ್ಕೆ ತೀರ್ಥಹಳ್ಳಿ ತತ್ತರ- 14 ಮಂದಿಯಲ್ಲಿ ಜ್ವರ ಪತ್ತೆ

Public TV
1 Min Read

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಾದ್ಯಂತ ಹಂದಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಇದೂವರೆಗೂ 14 ಜನರಲ್ಲಿ ಈ ಜ್ವರ ಪತ್ತೆಯಾಗಿದೆ. ಎಚ್1ಎನ್1 ಎಂದೇ ಕರೆಯಲಾಗುವ ಈ ಜ್ವರದ ಭಯದಿಂದ ತಾಲೂಕಿ ಜನತೆ ತತ್ತರಿಸಿದ್ದಾರೆ.

ಶಿವರಾಜಪುರ, ಮೇಲಿನಕುರುವಳ್ಳಿ, ಮಹಿಷಿ, ದಬ್ಬಣಗದ್ದೆ ಮೇಗರವಳ್ಳಿ ಇನ್ನಿತರ ಪ್ರದೇಶಗಳಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ತೀರ್ಥಹಳ್ಳಿಯಲ್ಲಿರುವ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ವಿಶೇಷ ಘಟಕವನ್ನು ತೆರೆಯಲಾಗಿದ್ದು, ನಿತ್ಯ 20-30 ಜನ ಬರುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಇನ್ನೂ ಅಧಿಕೃತವಾಗಿ ದೊರಕಿಲ್ಲ.

ಸ್ಟಾಫ್ ನರ್ಸ್‍ಗಳ ಕೊರತೆ ಇದ್ದದ್ದರಿಂದ ಶಿವಮೊಗ್ಗದಿಂದ ಹೆಚ್ಚುವರಿಯಾಗಿ 25 ಜನರನ್ನು ತೀರ್ಥಹಳ್ಳಿಗೆ ಕಳಿಸಲಾಗಿದೆ. ಇಲ್ಲಿಂದ ನಿತ್ಯವೂ ಶಂಕಿತ 15-20 ರೋಗಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಮಣಿಪಾಲ ಹಾಗೂ ಶಿವಮೊಗ್ಗದ ಪ್ರಯೋಗಾಲಯಗಳಿಗೆ ಕಳಿಸಲಾಗುತ್ತಿದೆ. ಇದನ್ನೂ ಓದಿ: ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

ಮುಖ್ಯವಾಗಿ ಕೆಮ್ಮು ಹಾಗೂ ನೆಗಡಿಯಿಂದ ಈ ಜ್ವರದ ವೈರಸ್‍ಗಳು ಹರಡುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಹಾಗೂ ಸ್ವಚ್ಛತೆ ಬಗ್ಗೆ ಗಮನ ಇರಲಿ. ಅಲ್ಲದೇ ಈ ಜ್ವರಕ್ಕೆ ಅಗತ್ಯವಿರುವ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಕಿರಣ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಎಚ್ಚರಿಕೆಯಿಂದ ಇರಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೇವಲ ತೀರ್ಥಹಳ್ಳಿ ಮಾತ್ರವಲ್ಲದೆ ಶಿವಮೊಗ್ಗದ ಹೊಸನಗರ, ಭದ್ರಾವತಿ, ಶಿಕಾರಿಪುರ ತಾಲೂಕುಗಳಲ್ಲೂ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *