ಟೀ ಮಾರುವವನ ಯಡವಟ್ಟಿಗೆ 13 ಮಂದಿ ಬಲಿ

Public TV
2 Min Read

– ಮಹಾರಾಷ್ಟ್ರ ರೈಲು ದುರಂತಕ್ಕೆ ಕಾರಣ ಬಹಿರಂಗ

ಮುಂಬೈ: ಮಹಾರಾಷ್ಟ್ರದಲ್ಲಿ ರೈಲು ದುರಂತ ಸಂಭವಿಸಿ 13 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಈ ರೈಲು ದುರಂತಕ್ಕೆ ಟೀ ಮಾರುವವನ ಯಡವಟ್ಟೇ ಕಾರಣ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜಲಗಾಂವ್ ರೈಲು ಅಪಘಾತಕ್ಕೆ ಟೀ ಮಾರುವವನೇ ಕಾರಣ, ಆತನಿಂದಲೇ 13 ಮಂದಿ ಬಲಿಯಾಗಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಬಲಿ – ಗೃಹ ಸಚಿವರಿಗೆ ಮಾಂಗಲ್ಯಸರ ಪೋಸ್ಟ್ ಮಾಡಿದ ಮೃತನ ಪತ್ನಿ

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೀ ಮಾರುವವನಿಂದಲೇ ಜಲಗಾಂವ್ ರೈಲು ದುರಂತ ಸಂಭವಿಸಿದೆ. ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ (Pushpak Express) ರೈಲಿನಲ್ಲಿ ಪ್ಯಾಂಟ್ರಿಯಿಂದ ಬಂದ ಟೀ ಮಾರುವವನೊಬ್ಬ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ಕೂಗಿದ್ದಾನೆ. ಇದನ್ನು ಕೇಳಿಸಿಕೊಂಡ ಉತ್ತರ ಪ್ರದೇಶದ ಶ್ರಾವಸ್ತಿಯ ಮೂಲದ ಇಬ್ಬರು ಅಲ್ಲಿದ್ದ ಇತರರಿಗೂ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ತಮ್ಮ ರಕ್ಷಣೆಗಾಗಿ ರೈಲಿನ ಅಲಾರಾಂ ಚೈನ್‌ನ್ನು ಎಳೆದು ರೈಲನ್ನು ನಿಲ್ಲಿಸಿದ್ದಾರೆ.

ರೈಲಿನಿಂದ ಇಳಿದ ಪ್ರಯಾಣಿಕರು ಪಕ್ಕದ ರೈಲು ಹಳಿಯ ಮೇಲೆ ನಿಂತಿದ್ದಾರೆ. ಇದೇ ವೇಳೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ (Karnataka Express) ರೈಲು ಪ್ರಯಾಣಿಕರು ನಿಂತಿದ್ದ ಹಳಿಯ ಮೇಲೆ ಬಂದಿದೆ. ಪರಿಣಾಮ ಹಳಿಯ ಮೇಲಿಂದ ಇಳಿಯದೇ ಅಲ್ಲೇ ನಿಂತಿದ್ದವರ ಪೈಕಿ 13 ಮಂದಿ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ. ಬೆಂಕಿಯಿಂದಾಗಿ ಅಪಘಾತ ಸಂಭವಿಸಿದೆ ಎನ್ನುವುದು ಸುಳ್ಳು, ಸದ್ಯ ಮೃತರ ಪೈಕಿ 10 ಜನರನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈಲ್ವೆ ಇಲಾಖೆ ಮೃತರ ಕುಟಂಬಸ್ಥರಿಗೆ 1.5 ಲಕ್ಷ ರೂ. ಪರಿಹಾರ ಘೋಷಿಸಿದೆ. ಸಂಭವಿಸಿದ ಅಪಘಾತದಲ್ಲಿ ರೈಲ್ವೆಯಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ. 4.45ಕ್ಕೆ ಪುಷ್ಪಕ್ ಎಕ್ಸ್ಪ್ರೆಸ್ ನಿಂತ 20 ನಿಮಿಷಗಳ ಬಳಿಕ 5.05ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್‌ ಬಂದಿದೆ. ಆದರೆ ಜನರು ಹಳಿ ಬಿಟ್ಟು ಕದಡದ ಕಾರಣ ದುರಂತ ಆಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಘಟನೆ ಐನು?
ಬೆಂಗಳೂರಿನಿಂದ ದೆಹಲಿಗೆ ಸಾಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 13 ಮಂದಿ ಸಾವನ್ನಪ್ಪಿದ್ದರು. ಮಹಾರಾಷ್ಟ್ರದ ಜಲಗಾಂವ್ ದಾಟುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ಭೀತಿ ಮೂಡಿಸಿತ್ತು. ಇದರಿಂದ ಪ್ರಯಾಣಿಕರು ರೈಲಿನ ಚೈನ್ ಎಳೆದಿದ್ದಾರೆ. ರೈಲು ನಿಂತ ತಕ್ಷಣ ಪ್ರಯಾಣಿಕರು ಇಳಿದು ರೈಲ್ವೆ ಹಳಿ ಮೇಲೆ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಟ್ರ‍್ಯಾಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರ ಮೇಲೆ ಹರಿದಿತ್ತು. ಪರಿಣಾಮವಾಗಿ 13 ಮಂದಿ ಮೃತಪಟ್ಟಿದ್ದರು.ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ

Share This Article