– ಸ್ಥಳದಲ್ಲಿ 40 ಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ, ಐವರು ಗಂಭೀರ
– ಪ್ರಧಾನಿ ಮೋದಿ, ಸಿಎಂ ಪಿಣರಾಯಿ ವಿಜಯನ್ ಸಂತಾಪ
ತಿರುವನಂತಪುರಂ: ಕೇರಳದ ʻತ್ರಿಶೂರ್ ಪೂರಂ ಉತ್ಸವʼಕ್ಕೆ (Thrissur Pooram festivities) ಸಿಡಿಮದ್ದು ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಮಂಗಳವಾರ (ಇಂದು) ಭಾರೀ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಸಾವುಗಳನ್ನು ದೃಢಪಡಿಸಿದೆ.
13 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರದಿಂದ ಶುರುವಾಗಿರುವ ತ್ರಿಶೂರ್ ಪೂರಂ ಉತ್ಸವದ ಭಾಗವಾಗಿ ಪಟಾಕಿಗಳನ್ನ ತಯಾರಿಸುತ್ತಿದ್ದ ಕಾರ್ಖಾನೆಯ ಶೆಡ್ನಲ್ಲಿ ಸ್ಫೋಟ ಸಂಭವಿಸಿದೆ. ಇಂದು (ಏ.21) ಮಧ್ಯಾಹ್ನ 3:30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಇದಾದ ಬಳಿಕ ಆ ಪ್ರದೇಶದಲ್ಲಿ ಮತ್ತೆ ಮತ್ತೆ ಸ್ಫೋಟಗಳು ಆಗಿದ್ದು, ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನೂ ಘಟನಾ ಸ್ಥಳದಲ್ಲಿ 40 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಐವರ ಸ್ಥತಿ ಗಂಭೀರವಾಗಿದೆ. ಸ್ಥಳದಲ್ಲಿ ಬೀಡುಬಿಟ್ಟಿರುವ ರಕ್ಷಣಾ ಸಿಬ್ಬಂದಿ ಸ್ಫೋಟಕ್ಕೆ ನಿಖರ ಕಾರಣ ಪತ್ತೆ ಮಾಡುತ್ತಿದ್ದಾರೆ.
ವೈದ್ಯಕೀಯ ನೆರವು ನೀಡುವಂತೆ ಸಿಎಂ ಸೂಚನೆ
ಇನ್ನೂ ಘಟನಾ ಮಾಹಿತಿ ಪಡೆದಿರುವ ಸಿಎಂ ಪಿಣರಾಯಿ ವಿಜಯನ್ (Pinarayi Vijayan), ಅವರು ಗಾಯಾಳುಗಳಿಗೆ ಎಲ್ಲಾ ರೀತಿಯ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿ ಮಾಹಿತಿ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಪಟಾಕಿ ಕಾರ್ಖಾನೆ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಕಚೇರಿ (PMO Officr) ಸಂತಾಪ ಸೂಚಿಸಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಕೇರಳದ ತ್ರಿಶೂರ್ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಅಪಘಾತದಿಂದ ಜೀವಹಾನಿ ಸಂಭವಿಸಿದ ಬಗ್ಗೆ ಕೇಳಿ ಅತೀವ ದುಃಖವಾಯಿತು. ತಮ್ಮ ಪ್ರೀತಿಪಾತ್ರರನ್ನ ಕಳೆದುಕೊಂಡವರಿಗೆ ನನ್ನ ಆಳವಾದ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಎಕ್ಸ್ ನಲ್ಲಿ ಹಂಚಿಕೊಂಡಿದೆ.
The Prime Minister has announced that an ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000. https://t.co/TOGx8sEISm
— PMO India (@PMOIndia) April 21, 2026
ತ್ರಿಶೂರ್ ಪೂರಂ ಉತ್ಸವದ ಮಹತ್ವ ಏನು?
ತ್ರಿಶೂರ್ ಪೂರಂ ಕೇರಳದ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಹಿಂದೂ ದೇವಾಲಯದ ಉತ್ಸವ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳಲ್ಲಿ (ಮಲಯಾಳಂ ತಿಂಗಳು ಮೇಡಂ) ತ್ರಿಶೂರ್ನ ವಡಕ್ಕುನ್ನಥನ್ ದೇವಸ್ಥಾನದಲ್ಲಿ ಉತ್ಸವ ನಡೆಯುತ್ತದೆ. ಇದು ಅಲಂಕೃತ ಆನೆಗಳು, ಸಾಂಪ್ರದಾಯಿಕ ವಾದ್ಯಗೋಷ್ಠಿ (ಚೆಂಡ ಮೇಲಂ, ಪಂಚವಾದ್ಯಂ), ವರ್ಣರಂಜಿತ ‘ಕುಡಮಾಟ್ಟಂ’ (ಛತ್ರಿ ಬದಲಾವಣೆ) ಮತ್ತು ಬೃಹತ್ ಪಟಾಕಿ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಈ ಉತ್ಸವಕ್ಕಾಗಿ ಪಟಾಕಿ ತಯಾರಿಸುತ್ತಿದ್ದ ಕಾರ್ಖಾನೆಯಲ್ಲೇ ಈಗ ಸ್ಫೋಟ ಸಂಭವಿಸಿದೆ.



