ಬೆಳಗಾವಿ: ಅಗ್ನಿಕುಂಡದಲ್ಲಿ ಬಿದ್ದು 12 ವರ್ಷದ ಬಾಲಕನಿಗೆ ಗಂಭೀರ ಗಾಯ

Public TV
1 Min Read

-ಮಂಡ್ಯದಲ್ಲಿ ಅಗ್ನಿಕುಂಡಕ್ಕೆ ಬಿದ್ದು ಇಬ್ಬರು ಗಾಯ

ಬೆಳಗಾವಿ/ಮಂಡ್ಯ: ಬೆಳಗಾವಿ ತಾಲೂಕಿನ ಚಂದನಹೊಸರು ಗ್ರಾಮದಲ್ಲಿ ಅಗ್ನಿ ಕುಂಡ ಹಾಯುವಾಗ 12 ವರ್ಷದ ಬಾಲಕ ಕುಂಡದಲ್ಲಿ ಬಿದ್ದು ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಂದ್ರಶೇಖರ್ ಹಳೇಮನಿ ಅಗ್ನಿ ಕುಂಡದಲ್ಲಿ ಬಿದ್ದು ಗಾಯಗೊಂಡ ಬಾಲಕ. ಚಂದ್ರಶೇಖರನನ್ನು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿಯೂ ಸಹ ಕೆಂಡ ಹಾಯುವಾಗ ಇಬ್ಬರು ಬಿದ್ದು ಗಾಯಗೊಂಡಿದ್ದಾರೆ. ನಾಗಮಂಗಲ ತಾಲೂಕಿನ ಮದ್ದೇನಹಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಮದ್ದೇನಹಟ್ಟಿಯಮ್ಮ ದೇವರ ಕೊಂಡೋತ್ಸವ ನಡೆಯುತ್ತಿತ್ತು. ಈ ವೇಳೆ ಇಬ್ಬರು ಅಗ್ನಿ ಕುಂಡದಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ದೇವರ ಗುಡ್ಡಪ್ಪ ಮತ್ತು ರಾಜೇಶ್ ಅಗ್ನಿ ಕುಂಡದಲ್ಲಿ ಬಿದ್ದು ಗಾಯಗೊಂಡವರು. ಕೊಂಡೋತ್ಸವ ವೇಳೆಯಲ್ಲಿ ಕೊಂಡದ ಸುತ್ತಮುತ್ತ ತಳ್ಳಾಟ ನೂಕಾಟ ಹೆಚ್ಚಾಗಿದ್ದರಿಂದ ಕೊಂಡದ ಸಮೀಪವೇ ನಿಂತಿದ್ದ ಭಕ್ತ ರಾಜೇಶ್ ಕೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಆ ನಂತರ ದೇವರ ಗುಡ್ಡಪ್ಪ ಕೊಂಡ ಹಾಯುವಾಗ ಇನ್ನೇನು ಕೊಂಡ ಹಾದು ಮುಗಿಯಿತು ಎನ್ನುವಷ್ಟರಲ್ಲಿ ಕೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಕಳೆದೊಂದು ತಿಂಗಳಿನಿಂದ ಮಂಡ್ಯದಲ್ಲಿ ನಾಲ್ಕು ಕೊಂಡ ದುರಂತಗಳು ಸಂಭವಿಸಿದ್ದು, ಕೊಂಡ ಹಾಯುವಾಗ ಭಕ್ತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *