ಜಾರ್ಖಂಡ್ ಸಚಿವನ ಆಪ್ತನ ಮನೆಯಲ್ಲಿ 12 ಗಂಟೆ, 6 ಮೆಷಿನ್, 30 ಕೋಟಿ ಹಣ ಎಣಿಕೆ!

Public TV
1 Min Read

– ಇದು ಕಾಂಗ್ರೆಸ್ ಲೂಟಿಗೆ ಸಾಕ್ಷಿ ಅಂತಾ ಮೋದಿ ಟೀಕೆ

ರಾಂಚಿ: ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿಯೇ ಜಾರ್ಖಂಡ್‍ನ (Jharkhand) ಮನೆಯೊಂದ್ರಲ್ಲಿ ದುಡ್ಡಿನ ರಾಶಿಯೇ ಪತ್ತೆಯಾಗಿದೆ. ಯಾವುದೇ ಲೆಕ್ಕವಿಲ್ಲದ ಈ ಹಣದ ಮೊತ್ತ 30 ಕೋಟಿಗೂ ಹೆಚ್ಚಿದೆ. 12 ಗಂಟೆಗಳ ಕಾಲ 6 ಮಷಿನ್‍ಗಳ ಮೂಲಕ ಈ ದುಡ್ಡನ್ನು ಎಣಿಕೆ ಮಾಡಲಾಗಿದೆ.

ಮನಿಲಾಂಡ್ರಿಂಗ್ (Money Laundering Case) ನಿಗ್ರಹ ಕಾಯ್ದೆಯಡಿ ರಾಂಚಿಯ ವಿವಿಧೆಡೆ ಇಂದು ಬೆಳ್ಳಂಬೆಳಗ್ಗೆ ಇಡಿ ದಾಳಿ ನಡೆಸಿತ್ತು. ಗ್ರಾಮೀಣಾಭಿವೃದ್ಧಿ ಮಂತ್ರಿಯೂ ಆಗಿರುವ ಕಾಂಗ್ರೆಸ್ ಮುಖಂಡ ಆಲಂಗೀರ್ ಆಲಂ (Alamgir Alam) ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಸಹಾಯಕನ ಮನೆಯಲ್ಲಿ ಈ ದುಡ್ಡಿನ ರಾಶಿ ಕಂಡುಬಂದಿದೆ. ಕೊಠಡಿಯೊಂದ್ರಲ್ಲಿ ಜೋಡಿಸಿದ್ದ ನೋಟುಗಳ ಕಂತೆಯ ವೀಡಿಯೋಗಳು ವೈರಲ್ ಆಗಿವೆ. ಈ ಪ್ರಕರಣವೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಪ್ರಧಾನಿ ಮೋದಿ (Narendra Modi) ಪ್ರತಿಕ್ರಿಯಿಸಿ, ಜಾರ್ಖಂಡ್‍ನಲ್ಲಿ ದುಡ್ಡಿನ ಪರ್ವತವೇ ಪತ್ತೆಯಾಗಿದೆ. ಇದು ಜನರಿಂದ ಲೂಟಿ ಹೊಡೆದ ಹಣ. ಭ್ರಷ್ಟಾಚಾರದ ವಿರುದ್ಧ ಮೋದಿ ಕ್ರಮ ತಗೋತಾರೆ ಅನ್ನೊದಕ್ಕೇ ಇದೆ ಸಾಕ್ಷಿ ಎಂದು ಹೇಳಿಕೊಂಡಿದ್ದಾರೆ. ಆದರೆ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಆಲಂಗೀರ್ ಸ್ಪಷ್ಟಪಡಿಸಿದ್ದಾರೆ. ಸಂಜೀವ್ ಲಾಲ್ ಸರ್ಕಾರ ಒದಗಿಸಿದ್ದ ಆಪ್ತ ಕಾರ್ಯದರ್ಶಿ ಅಷ್ಟೇ. ತಪ್ಪು ಮಾಡಿದವರ ವಿರುದ್ಧ ಕ್ರಮ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆ ಸಮಯದಲ್ಲೇ ಇಡಿಯಿಂದ ದೊಡ್ಡ ಬೇಟೆ – ಕಂತೆ ಕಂತೆ ನೋಟು ಪತ್ತೆ

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 100 ಕೋಟಿ ಅವ್ಯವಹಾರ ಆಗಿರುವ ಆರೋಪದ ಮೇರೆಗೆ 2023ರಲ್ಲಿಯೇ ಮಾಜಿ ಮುಖ್ಯ ಎಂಜಿನಿಯರ್ ವೀರೇಂದ್ರ ರಾಮ್ ಅರೆಸ್ಟ್ ಆಗಿದ್ರು. ಇಂದು ಈತನಿಗೆ ಸಂಬಂಧಿಸಿದ 10 ಕಡೆ ಇಡಿ ದಾಳಿ ನಡೆಸಿತ್ತು.

Share This Article