ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಖಾಸಗಿ ಬಸ್ ಏಜೆಂಟ್ ಆಗಿದ್ರು

Public TV
2 Min Read

ಮಡಿಕೇರಿ: ಆರ್ ಗುಂಡೂರಾವ್ (R Gundu Rao) ಹಲವು ನಿಟ್ಟಿನಲ್ಲಿ ಗಮನಾರ್ಹ ವ್ಯಕ್ತಿತ್ವದ ಮುಖ್ಯಮಂತ್ರಿಗಳಾಗಿದ್ದವರು. ಗುಂಡೂರಾವ್ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ 1937ರ ಏಪ್ರಿಲ್ 8ರಂದು ಜನಿಸಿದರು. ತಂದೆ ಕೆ ರಾಮರಾವ್ ಶಾಲಾ ಶಿಕ್ಷಕರಾಗಿದ್ದರು. ತಾಯಿ ಚೆನ್ನಮ್ಮ. ಆರಂಭದಲ್ಲಿ ಖಾಸಗಿ ಬಸ್‌ನ ಏಜೆಂಟ್ (Bus Agent) ಆಗಿದ್ದ ಗುಂಡೂರಾವ್ ಆಗಲೇ ಅನೇಕ ಸಮಾಜಮುಖಿ ಕೆಲಸ ಮಾಡಿ ಜನಪ್ರಿಯ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಗುಂಡೂರಾವ್ ತಮ್ಮ 24ನೇ ವಯಸ್ಸಿನಲ್ಲೇ ಕುಶಾಲನಗರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಯುವಪಡೆಯನ್ನು ನಿಲ್ಲಿಸಿ, ಗೆಲ್ಲಿಸಿ, ಪುರಸಭೆಯನ್ನು ಕೈವಶ ಮಾಡಿಕೊಂಡಿದ್ದರು. 9 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಗುಂಡೂರಾಯರು 1965ರಲ್ಲಿ ಕೊಡಗು ಜಿಲ್ಲೆ ಕಾಂಗ್ರೆಸ್ (Congress) ಸದಸ್ಯರಾದರು. 1972ರಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 1973ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ವಾರ್ತೆ, ಕ್ರೀಡೆ ಮತ್ತು ಯುವಜನ ಸೇವಾ ಖಾತೆಯ ರಾಜ್ಯ ಸಚಿವರಾದರು. 1976ರಲ್ಲಿ ವಸತಿ ಮತ್ತು ಯುವಜನ ಸೇವಾಖಾತೆ ಸಚಿವರಾದರು. 1978ರಲ್ಲಿ ಸಾರಿಗೆ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾದರು. 1980ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಜನವರಿ 12ರಂದು ಗುಂಡೂರಾವ್ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿಗಳಾಗಿ (Chief Minister) ಅಧಿಕಾರ ಸ್ವೀಕಾರ ಮಾಡಿದರು.

ಗುಂಡೂರಾವ್ ಕಚೇರಿ ಅಥವಾ ವಿಧಾನಸಭೆಯಯಲ್ಲಿ ತಾವು ನೀಡಿದ ಆದೇಶಗಳು ತಕ್ಷಣವೇ ಜಾರಿಗೆ ಬರಬೇಕು ಎಂಬ ಕ್ಷಿಪ್ರ ಮನೋಧರ್ಮಕ್ಕೆ ಹೆಸರಾಗಿದ್ದರು. ಬೆಂಗಳೂರಿನ ಸುಭಾಷ್‌ನಗರದಲ್ಲಿ ವಿಶಾಲವಾದ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಇಂತಹ ನಿರ್ಧಾರಗಳಲ್ಲಿ ಒಂದು. ಅನೇಕ ಮೆಡಿಕಲ್ ಕಾಲೇಜುಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಮಂಜೂರಾತಿ ಪಡೆದವು. ಕಾವೇರಿ 3ನೇ ಹಂತದ ಕೆಲಸ ಕೇವಲ ಒಂದೂವರೆ ವರ್ಷದಲ್ಲೇ ನಡೆಯಿತು. ಮೈಸೂರಿನ ಕಲಾಮಂದಿರ ನಿರ್ಮಾಣಗೊಂಡಿತು. ಇದನ್ನೂ ಓದಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿದೆ: ಅಮಿತ್ ಶಾ

ಗುಂಡೂರಾವ್ ತಮ್ಮ ಸರ್ಕಾರವನ್ನು ‘ಇಂದಿರಾ ಪೋಷಿತ ನಾಟಕ ಕಂಪನಿ’ ಎಂದು ಕರೆದುಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಸಾರ್ವಜನಿಕ ರಂಗದ ಕೈಗಾರಿಕೆಗಳ 77 ದಿನಗಳ ದೀರ್ಘ ಮುಷ್ಕರ, ಗೋಕಾಕ್ ಚಳವಳಿಯಲ್ಲಿ ರಾಜ್‌ಕುಮಾರ್ ಪ್ರವೇಶ ತಂದ ಬಿರುಸು, ನರಗುಂದ ಹಾಗೂ ನವಲಗುಂದಗಳಲ್ಲಿ ನಡೆದ ರೈತ ಚಳವಳಿ ಮುಂತಾದವುಗಳ ಪರಿಣಾಮಗಳನ್ನು ಅವರ ಆಡಳಿತ ಕಾಣಬೇಕಾಯಿತು.

1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಗುಂಡೂರಾವ್ ಜನತ ಪರಿವಾರದಿಂದ ಸ್ಪರ್ಧಿಸಿದ ಜಿ ವಿಜಯ ಅವರ ಮುಂದೆ ಸೋಲು ಕಂಡರು. ಹುರುಪು ಹುಮ್ಮಸ್ಸು ಉತ್ಸಾಹಗಳಿಂದ ಜೀವನ ಸಾಗಿಸಿದ ಗುಂಡೂರಾವ್ ಕೆಲ ಕಾಲ ರಕ್ತದ ಕ್ಯಾನ್ಸರ್‌ನಿಂದ ಬಳಲಿ ಲಂಡನ್‌ನಲ್ಲಿ ಚಿಕಿತ್ಸೆ ಪಡೆದರು. ಆದರೆ ಕಾಲ ಕಿವಿಗೊಡಲಿಲ್ಲ 56 ವರ್ಷದಲ್ಲಿ ಗುಂಡೂರಾವ್ 1993ರ ಆಗಸ್ಟ್ 22ರಂದು ನಿಧನರಾದರು. ಇದನ್ನೂ ಓದಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್‌ ಕಿ ಬಾತ್‌ನಲ್ಲಿ ಮೋದಿ ಕರೆ

Share This Article
Leave a Comment

Leave a Reply

Your email address will not be published. Required fields are marked *