ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

Public TV
2 Min Read

ಡಿಸ್ಪುರ್: 11 ವರ್ಷದ ಬಾಲಕ ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತನ್ನ ತಾಯಿ ಸೇರಿದಂತೆ ಮೂವರನ್ನು ರಕ್ಷಿಸಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

11 ವರ್ಷದ ಕಮಲ್ ಕಿಶೋರ್ ದಾಸ್ ಮೂವರನ್ನು ರಕ್ಷಿಸಿ ಶೌರ್ಯ ಮೆರೆದ ಬಾಲಕ. ಬುಧವಾರ ಕಮಲ್ ಕಿಶೋರ್ ದಾಸ್ ಕುಟುಂಬ ಉತ್ತರ ಗುವಾಹಟಿಯಿಂದ ತನ್ನ ಅಜ್ಜಿಯನ್ನು ಬಿಟ್ಟು ಮನೆಗೆ ವಾಪಸ್ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಅಸ್ಸಾಂನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ದೋಣಿ ಪಿಲ್ಲರ್ ಗೆ ಬಡಿದು ಮಗುಚಿದೆ.

ಈ ವೇಳೆ ಕಮಲ್ ತಾಯಿ ಆತನನ್ನು ಈಜಿ ಪಿಲ್ಲರ್ ಹಿಡಿದುಕೊಳ್ಳುವಂತೆ ಹೇಳಿದ್ದಾರೆ. ಅದರಂತೆಯೇ ಕಮಲ್ ಈಜಿ ಪಿಲ್ಲರ್ ಅನ್ನು ಹಿಡಿದುಕೊಂಡಿದ್ದಾನೆ. ಬಳಿಕ ಕಮಲ್ ಹಿಂದೆ ತಿರುಗಿ ನೋಡಿದಾಗ ತನ್ನ ತಾಯಿ ಮತ್ತು ಚಿಕ್ಕಮ್ಮ ಈಜಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಕಮಲ್ ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ. ಬಳಿಕ ತಾಯಿಯ ತಲೆ ಕೂದಲನ್ನು ಹಿಡಿದುಕೊಂಡು ಈಜಿ ಪಿಲ್ಲರ್ ಹಿಡಿದುಕೊಳ್ಳಲು ಸಹಾಯ ಮಾಡಿದ್ದಾನೆ. ನಂತರ ದೂರದಲ್ಲಿ ತನ್ನ ಚಿಕ್ಕಮ್ಮ ಸಹ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಮತ್ತೆ ನೀದಿಗೆ ಹಾರಿ ಚಿಕ್ಕಮ್ಮ ನನ್ನು ರಕ್ಷಿಸಿದ್ದಾನೆ.

“ದೋಣಿ ಪಿಲ್ಲರ್ ಗೆ ಬಡಿದಾಗ ನನ್ನ ತಾಯಿಯು ನನ್ನ ಶೂಗಳನ್ನು ತೆಗೆದುಕೊಂಡು ಈಜುವಂತೆ ಹೇಳಿದರು. ಅದರಂತೆಯೇ ನಾನು ಈಜಿ ತೀರಕ್ಕೆ ಸೇರಿದೆ. ಆದರೆ ನಾನು ತೀರಕ್ಕೆ ಬಂದಾಗ ನನ್ನ ತಾಯಿ ಮತ್ತು ಚಿಕ್ಕಮ್ಮ ಈಜುಕೊಂಡು ಬರಲು ಸಾಧ್ಯವಾಗಿಲ್ಲ. ಬಳಿಕ ನಾನು ನದಿಗೆ ಹಾರಿ ತಾಯಿಯ ಕೂದಲನ್ನು ಹಿಡಿದುಕೊಂಡು ಬಂದು ಪಿಲ್ಲರ್ ಹಿಡಿದುಕೊಳ್ಳುವಂತೆ ಮಾಡಿದೆ” ಎಂದು ಕಮಲ್ ಹೇಳಿದ್ದಾನೆ.

ಬುರ್ಕಾ ಧರಿಸಿದ್ದ ಮಹಿಳೆ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ನದಿಯಲ್ಲಿ ತೇಲುವುದಕ್ಕೂ ಕಷ್ಟ ಪಡುತ್ತಿದ್ದರು. ಬಳಿಕ ನಾನು ಮತ್ತೆ ನದಿಗೆ ಜಿಗಿದು ಅವರನ್ನು ರಕ್ಷಿಸಿದೆ. ಆದರೆ ದುರದೃಷ್ಟವಶಾತ್ ಮಗು ತಾಯಿಯ ಕೈಯಿಂದ ಜಾರಿ ನೀರಿನೊಳಗೆ ಬಿದ್ದು ಮುಂದೆ ಹೋಯಿತು. ತಾಯಿಯೂ ಕೂಡ ಮಗುವನ್ನು ರಕ್ಷಿಸಲು ನದಿಗೆ ಜಿಗಿದರು. ಆದರೆ ಈ ವೇಳೆ ನಾನು ಏನು ಮಾಡಲು ಸಾಧ್ಯವಾಗಿಲ್ಲ ಎಂದು ಕಮಲ್ ಹೇಳಿದ್ದಾನೆ.

ಕಮಲ್ ವಾರದಲ್ಲಿ ಎರಡು ಬಾರಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುವುದನ್ನು ಅಭ್ಯಾಸ ಮಾಡಲು ಹೋಗುತ್ತಿದ್ದನು. ಇದರಿಂದಲೇ ಆತ ಧೈರ್ಯ ಪ್ರದರ್ಶಿಸಿ ನಮ್ಮ ಜೀವ ಉಳಿಸಲು ಸಾಧ್ಯವಾಯಿತು ಎಂದು ಕಮಲ್ ತಾಯಿ ಜಿತುಮೋನಿ ದಾಸ್ ಹೇಳಿದ್ದಾರೆ.

ಈ ದೋಣಿಯಲ್ಲಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದು, ಜೊತೆಗೆ ಅಕ್ರಮವಾಗಿ 18 ಮೋಟಾರ್ ಬೈಕ್ ಗಳನ್ನು ಸಾಗಿಸಲಾಗುತ್ತಿತ್ತು. ಮೂವರನ್ನು ಕಮಲ್ ರಕ್ಷಿಸಿದ್ದು, 12 ಮಂದಿ ಈಜಿ ದಡ ಸೇರಿದ್ದಾರೆ. 10 ಮಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *