ಉದ್ಯಮಿ ಪುತ್ರನ ಅಪಹರಿಸಿ 1 ಕೋಟಿ ರೂ.ಗೆ ಡಿಮಾಂಡ್ ಮಾಡಿದವ್ರು ಜೈಲು ಸೇರಿದ್ರು!

Public TV
2 Min Read

ಹುಬ್ಬಳ್ಳಿ: 7ನೇ ತರಗತಿ ಬಾಲಕನ್ನು ಅಪಹರಿಸಿ 1 ಕೋಟಿ ರೂ. ಬೇಡಿಕೆಯಿಟ್ಟಿದ್ದ ಘಟನೆ ರಾಜ್ಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಪ್ರತಿಷ್ಠಿತ ಉದ್ಯಮಿ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಿ ಅಹ್ಮದ್ ಅತ್ತರ್ ಅವರ ಪುತ್ರನನ್ನು ಜುಲೈ 30ರಂದು ದುಷ್ಕರ್ಮಿಗಳು ಅಪಹರಿಸಿ 1 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಬಳಿಕ ನಡೆದ ಮಾತುಕತೆಯಲ್ಲಿ 40 ಲಕ್ಷ ರೂ. ಪಡೆಯಲು ಒಪ್ಪಿಗೆ ನೀಡಿದ್ದರು. ಇದರಂತೆ ಅಹ್ಮದ್ 40 ಲಕ್ಷ ರೂ. ನೀಡಿ ತಮ್ಮ ಮಗನನ್ನು ದುಷ್ಕರ್ಮಿಗಳಿಂದ ಬಿಡಿಸಿಕೊಂಡು ಬಂದಿದ್ದರು.

ಏನಿದು ಪ್ರಕರಣ?: ಹುಬ್ಬಳ್ಳಿಯ ವಿದ್ಯಾನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ ಅಹ್ಮದ್ ಅವರ ಪುತ್ರ 7ನೇ ತರಗತಿ ಓದುತ್ತಿದ್ದ. ಇದನ್ನು ಗಮನಿಸಿದ್ದ ಆರೋಪಿಗಳು ಶಾಲೆಯ ಬಳಿಯಿಂದ ಬಾಲಕನನ್ನು ಅಪಹರಣ ಮಾಡಿದ್ದರು. ಬಳಿಕ ಅಹ್ಮದ್ ಅವರಿಂದ ಹಣ ಪಡೆದು ಮರುದಿನ ಅಂದರೆ ಜುಲೈ 31 ಸಂಜೆ ಬಾಲಕನನ್ನು ಗದಗ ಜಿಲ್ಲೆಯ ಕದಂಪೂರ ಗ್ರಾಮದಲ್ಲಿ ಬಿಡುಗಡೆ ಮಾಡಿದ್ದರು. ಪುತ್ರನನ್ನು ಅಪಹರಣ ಮಾಡಿದ್ದ ಆರೋಪಿಗಳಿಂದ ಅಹ್ಮದ್ ತಮ್ಮ ಮಗನನ್ನು ಬಿಡಿಸಿಕೊಂಡು ಬಂದ ಬಳಿಕ ಜುಲೈ 31ರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.

ಬಾಲಕನ ಸುಳಿವು: ಪ್ರಕರಣದ ಕುರಿತು ಅಹ್ಮದ್ ರಿಂದ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅಪಹರಣಕ್ಕೆ ಒಳಗಾಗಿದ್ದ ಬಾಲಕ ನೀಡಿದ ಸುಳಿವು ಆರೋಪಿಗಳ ಪತ್ತೆಗೆ ಸಹಾಯವಾಗಿತ್ತು.

ಅಂದಹಾಗೇ ಹುಬ್ಬಳ್ಳಿ ನಗರದ ಶಾಲೆಯಿಂದ ಬಾಲಕನ್ನು ಅಪಹರಣ ಮಾಡಿದ್ದ ಆರೋಪಿಗಳು ಅಂದು ಆಟೋವೊಂದರಲ್ಲಿ ನಗರವನ್ನು ಸುತ್ತಿದ್ದರು. ಈ ವೇಳೆ ಅಹ್ಮದ್ ಅವರೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ಹಣದ ವ್ಯವಹಾರ ನಡೆಸಿದ್ದರು. ಈ ವೇಳೆ ಬಾಲಕ ತಾನು ಪ್ರಯಾಣಿಸಿದ್ದ ಆಟೋ ಸಂಖ್ಯೆಯನ್ನು ಗಮನಿಸಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ.

ಬಾಲಕನಿಂದ ಪಡೆದ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆ ನಡೆಸಿದ್ದರು. ಹುಬ್ಬಳ್ಳಿ ನಗರದಲ್ಲಿ ಸಂಚಾರಿಸುವ ಎಲ್ಲಾ ಆಟೋಗಳ ಮಾಹಿತಿ ಪೊಲೀಸರ ಬಳಿ ಇದ್ದು, ಈ ದಾಖಲೆ ಅನ್ವಯ ಆಟೋ ಚಾಲಕನ್ನು ಅಬ್ದುಲ್ ಶಿರೂರ ಹಾಗೂ ಅಹ್ಮದ ಆಜಾದ್‍ರನ್ನು ಬಂಧಿಸಿದ್ದರು. ಬಳಿಕ ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಪ್ರಕರಣ ಇತರೇ 8 ಆರೋಪಿಗಳು ಸಿಕ್ಕಿಬಿದ್ದರು. ಆದರೆ ವಿಚಾರಣೆ ವೇಳೆ ಪೊಲೀಸರಿಗೆ ಮತ್ತೊಂದು ಶಾಕಿಂಗ್ ಸಂಗತಿ ತಿಳಿದು ಬಂದಿದ್ದು, ಅಹ್ಮದ್ ಅವರ ಮನೆಯಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ ಅಜಾದ್ ಅಪಹರಣಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯಾಗಿದ್ದ.

ಬಾಲಕನನ್ನು ಅಪಹರಣ ಮಾಡಿದ ಬಳಿಕ 11 ಮಂದಿಯೂ ಅಹ್ಮದ್ ಚಲನವಲನವನ್ನು ಗಮನಿಸಿದ್ದರು. ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿದ್ದ ವೇಳೆಯೂ ಫೋನ್ ಮಾಡಿ ಪೊಲೀಸರಿಗೆ ದೂರು ನೀಡಿದರೆ ಬಾಲಕನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು.

ಸದ್ಯ ಕೃತ್ಯದಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಬಂಧಿತರ ಕೈಯಲ್ಲಿದ್ದ 26 ಲಕ್ಷ ರೂ. ಹಣ, ಕೃತ್ಯಕ್ಕೆ ಬಳಸಿದ್ದ ಆಟೋ, ಬೈಕ್ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಅಜಾದ್‍ನನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *