ಸಿಎಂ ಗೆಲುವಿಗೆ ಬಾದಾಮಿಯಲ್ಲಿ 11 ನಾಮಪತ್ರ ವಾಪಸ್

Public TV
1 Min Read

ಬಾಗಲಕೋಟೆ: ರೆಸಾರ್ಟ್ ನಲ್ಲಿ ಸಿ.ಎಂ ಇಬ್ರಾಹಿಂ, ಎಸ್.ಆರ್ ಪಾಟೀಲ್, ಆರ್.ಬಿ ತಿಮ್ಮಾಪುರ ನಡೆಸಿದ ಸಂಧಾನದ ಸಭೆ ಯಶಸ್ವಿಯಾಗಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಬಾದಾಮಿಯಲ್ಲಿ 24 ಪಕ್ಷೇತರರ ಪೈಕಿ 11 ಮಂದಿ ನಾಮಪತ್ರ ಹಿಂಪಡೆದಿದ್ದಾರೆ.

ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಬಾದಾಮಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಬೆಂಬಲಿಸಿ 11 ಮಂದಿ ನಾಮಪತ್ರ ವಾಪಾಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಾಳೆಯಿಂದ ಯುದ್ದೋಪಾದಿಯಲ್ಲಿ ಪ್ರಚಾರ ಮಾಡಲಿದ್ದೇವೆ. ಸಿಎಂ ಸಿದ್ದರಾಮಯ್ಯ ಅಭೂತಪೂರ್ವ ಗೆಲವು ಸಾಧಿಸಲಿದ್ದಾರೆ. ಹಳ್ಳಿಗಳಲ್ಲಿ ಸಿದ್ದರಾಮಯ್ಯ ನವರ ಪರ ಒಲವು ವ್ಯಕ್ತವಾಗಿದೆ. ಎಲ್ಲ ಸಮುದಾಯದ ಜನರ ಬೆಂಬಲ ಸಿಗಲಿದೆ. ನಮ್ಮ ಎದುರಾಳಿಗಳು ಶಕ್ತಿಶಾಲಿಗಳಾಗಿದ್ರು ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಗೆ ಬಾದಾಮಿಯಲ್ಲಿ ಗೋಡಂಬಿ, ದ್ರಾಕ್ಷಿನೂ ಸಿಗಲ್ಲ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಶೆಟ್ಟರ್ ಹುಬ್ಬಳ್ಳಿಯಲ್ಲಿ ಗೆಲ್ಲುವುದೇ ಕಷ್ಟವಾಗಿದೆ. ಮೊದಲು ಅವರು ಗೆಲ್ಲುವುದನ್ನು ನೋಡಿಕೊಳ್ಳಲಿ. ಬಾದಾಮಿ ಚಿಂತೆ ಬಿಡಲಿ. ನಾವು ಬಾದಾಮಿ ಗೋಡಂಬಿ ತಿನ್ನಲು ಇಲ್ಲಿಗೆ ಬಂದಿಲ್ಲ ಜನರಿಂದ ಮತ ಪ್ರಸಾದವನ್ನು ಬೇಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಆಡಳಿತ ದಲ್ಲಿ ಯಾರೂ ಬಳ್ಳಾರಿಗೆ ಕಾಲಿಡದ ಪರಿಸ್ಥಿತಿ ಬಂದಿತ್ತು. ಯಡಿಯೂರಪ್ಪ ಬಳ್ಳಾರಿಗೆ ಹೋಗಬೇಕಾದ್ರು ಗಣಿಧಣಿಗಳ ಸಮ್ಮತಿ ಬೇಕಿತ್ತು. ಸಿದ್ದರಾಮಯ್ಯ ಪಾದ ಯಾತ್ರೆ ಯಿಂದ ಗಣಿಧಣಿಗಳ ಆರ್ಭಟ ನಿಂತಿದೆ. ನಿರ್ಭಯವಾಗಿ ಬಳ್ಳಾರಿಗೆ ಹೋಗಿ ಬರಬಹುದಾಗಿದೆ. ಅದಕ್ಕಾಗಿ ಬಿಎಸ್‍ವೈ ಸಿದ್ದರಾಮಯ್ಯನವರಿಗೆ ಧನ್ಯವಾದ ಹೇಳಬೇಕು ಎಂದು ಟಾಂಗ್ ನೀಡಿದರು.

ಬಿಜೆಪಿಯ ಮಹಾಂತೇಶ್ ಮಮದಾಪೂರ್, ಎಂ.ಕೆ. ಪಟ್ಟಣಶೆಟ್ಟಿ ನಾಮಪತ್ರವನ್ನು ಹಿಂಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *