ಕೋಲಾರ: ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ.
ರಕ್ಷಿತಾ (15) ಕೊಲೆಯಾದ ವಿದ್ಯಾರ್ಥಿನಿ. ಜಿಲ್ಲೆಯ ಮಾಲೂರು ಪಟ್ಟಣದ ರೈಲ್ವೇ ಅಂಡರ್ ಪಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದೆ. ಮಾಲೂರು ಪಟ್ಟಣದ ಇಂದಿರಾನಗರದ ನಿವಾಸಿಯಾಗಿದ್ದ ರಕ್ಷಿತಾ, ಬಿಜಿಎಸ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಬುಧವಾರ ಸಂಜೆ 4.30ರ ವೇಳೆ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳಿಬ್ಬರು ಅಪಹರಣ ಮಾಡಿದ್ದರು. ಬಳಿಕ ಅದೇ ಮಾರ್ಗದಲ್ಲಿದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ವಿದ್ಯಾರ್ಥಿನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.
ಘಟನೆ ವೇಳೆ ರಕ್ಷಿತಾ ಜೊತೆಗಿದ್ದ ಸ್ನೇಹಿತೆ ದುಷ್ಕರ್ಮಿಗಳಿಂದ ತಪ್ಪಿಕೊಳ್ಳಲು ಯಶಸ್ವಿಯಾಗಿದ್ದಳು. ಬಳಿಕ ವಿದ್ಯಾರ್ಥಿನಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಸ್ಥಳಕ್ಕೆ ತಲುಪುವ ವೇಳೆಗೆ ರಕ್ಷಿತಾಳನ್ನು ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ದಿನ ನಿತ್ಯದಂತೆ ಶಾಲೆ ಅವಧಿ ಮುಗಿದ ಬಳಿಕ ರಕ್ಷಿತಾಳನ್ನು ಅವರ ತಂದೆ ಮನೆಗೆ ಕರೆದ್ಯೊಯುತ್ತಿದ್ದರು. ಆದರೆ ಇಂದು ಕೆಲಸ ನಿಮಿತ್ತ ತಂದೆ ಆಗಮಿಸಿರಲಿಲ್ಲ. ಹೀಗಾಗಿ ಸ್ನೇಹಿತೆಯೊಂದಿಗೆ ರಕ್ಷಿತಾ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಸದ್ಯ ರಕ್ಷಿತಾಳನ್ನು ಅಪಹರಣ ಮಾಡಲು ಆರೋಪಿಗಳು ಬಳಸಿದ್ದ ಬೈಕ್ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ರಕ್ಷಿತಾ ಸ್ನೇಹಿತೆ ಘಟನೆಯಿಂದ ಆತಂಕಗೊಂಡು ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿ ಎಚ್ಚರಗೊಂಡ ಬಳಿಕ ಪೊಲೀಸರು ತನಿಖೆ ಒಳಪಡಿಸುವ ಸಾಧ್ಯತೆ ಇದೆ. ಘಟನೆ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.