100 ಟನ್, 20 ಅಡಿ ಉದ್ದದ ರೇಣುಕಾಚಾರ್ಯರ ಪ್ರತಿಮೆಯ ಶಿಲೆ 100 ಚಕ್ರದ ಲಾರಿಯಲ್ಲಿ ರಂಭಾಪುರಿ ಮಠಕ್ಕೆ ಆಗಮನ

Public TV
1 Min Read

ಚಿಕ್ಕಮಗಳೂರು: 100 ಟನ್ ತೂಕವುಳ್ಳ 20 ಅಡಿ ಉದ್ದವಿರುವ ಬೃಹತ್ ಶಿಲೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠದ ಆವರಣ ತಲುಪಿದೆ.

ಪಂಚಪೀಠಗಳಲ್ಲೇ ಮೊದಲ ಪೀಠವಾಗಿರುವ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಆಂಧ್ರಪ್ರದೇಶದ ಮಡಕಶಿರಾ ಕಲ್ಲು ಕ್ವಾರಿಯಿಂದ ಬಹೃತ್ ಶಿಲೆ ಮಠದ ಆವರಣಕ್ಕೆ ಆಗಮಿಸಿದೆ. ಸೆಪ್ಟೆಂಬರ್ 10 ರಂದು ಆಂಧ್ರಪ್ರದೇಶದ ಮಡಕಶಿರಾದಿಂದ 100 ಚಕ್ರದ ಲಾರಿಯಲ್ಲಿ ಹೊರಟ ಈ ಶಿಲೆ ಐದು ದಿನಗಳ ಬಳಿಕ ಮಠಕ್ಕೆ ಆಗಮಿಸಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಮೆಗಾ ಶೈಕ್ಷಣಿಕ ಉತ್ಸವ ವಿದ್ಯಾಪೀಠಕ್ಕೆ ನಾಳೆ ಚಾಲನೆ

ಒಟ್ಟು 350 ಕಿ.ಮೀ. ದೂರದ ಆಂಧ್ರಪ್ರದೇಶದ ಮಡಕಶಿರಾದಿಂದ ಬಾಳೆಹೊನ್ನೂರಿಗೆ ಕಲ್ಲನ್ನು ತರಲಾಗಿದೆ. ಇದರ ತೂಕ ಸುಮಾರು 100 ಟನ್ ಇದ್ದು, 20 ಅಡಿ ಉದ್ದವಿದೆ. ಸಾಗಾಣೆ ಕಾರ್ಯದಲ್ಲಿ 12 ಕಾರ್ಮಿಕರು ತೊಡಗಿದ್ದಾರೆ ಎಂದು ಕಲ್ಲು ಸಾಗಾಟದ ಜವಾಬ್ದಾರಿ ಹೊತ್ತಿದ್ದ ಬೆಂಗಳೂರು ಮೂಲದ ಶ್ರೀಧರಬಾಬು ತಿಳಿಸಿದ್ದಾರೆ.

ಆಂಧ್ರದ ಮಡಕಶಿರಾದಿಂದ ಹೊರಟ ಕಲ್ಲು ಐದು ದಿನಗಳ ನಿರಂತರ ಪ್ರಯಾಣದ ವೇಳೆ ಪಾವಗಡ, ಮಧುಗಿರಿ, ತುಮಕೂರು, ತಿಪಟೂರು, ಶಿವಮೊಗ್ಗ, ಎನ್.ಆರ್.ಪುರ ಮಾರ್ಗವಾಗಿ ಬಂದು ಬಾಳೆಹೊನ್ನೂರು ತಲುಪಿದೆ. ಶಿಲಾಮೂರ್ತಿ ನಿರ್ಮಾಣಕ್ಕೆ ಬೇಕಾಗಿರುವ ಇನ್ನೂ ಎರಡೂ ಶಿಲೆಗಳು ಶೀಘ್ರವೇ ಮಠಕ್ಕೆ ಬರಲಿವೆ. ಯಂತ್ರಗಳ ಬಳಕೆಯಿಂದ ಕಲ್ಲನ್ನು ಅನ್ ಲೋಡ್ ಮಾಡಲು ಮುಂದಾಗುವುದರಿಂದ ಕಲ್ಲಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ 16 ಕಾರ್ಮಿಕರು ಬಳಸಿ ಲಾರಿಯಿಂದ ಅನ್ ಲೋಡ್ ಮಾಡಲಾಗುವುದು ಎಂದು ಶ್ರೀಧರಬಾಬು ಮಾಹಿತಿ ನೀಡಿದ್ದಾರೆ.

ಬರೋಬ್ಬರಿ 100 ಚಕ್ರದ ಲಾರಿಯಲ್ಲಿ 100 ಟನ್ ತೂಕದ 20 ಅಡಿ ಉದ್ದದ ಈ ಶಿಲೆ ಐದು ದಿನಗಳ ನಿರಂತರ ಪ್ರಯಾಣದಿಂದ ಬಂದಿದ್ದು, ಈ ಶಿಲೆಯನ್ನು ನೋಡಲು ಜನ ಕೂಡ ದೇವಾಲದಯದ ಆವರಣದಲ್ಲಿ ಜಮಾಯಿಸಿದರು. ರಂಭಾಪುರಿ ಮಠದ ಆವರಣದಲ್ಲಿ 8 ಕೋಟಿಗೂ ಅಧಿಕ ವೆಚ್ಚದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ನಿರ್ಮಾಣಗೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *