ಮಾವಿನ ಹಣ್ಣು ಕಿತ್ತಿದ್ದಕ್ಕೆ ಬಾಲಕನಿಗೆ ಗುಂಡಿಕ್ಕಿ ಹತ್ಯೆ!

Public TV
1 Min Read

ಪಾಟ್ನಾ: ಮಾವಿನ ಹಣ್ಣನ್ನು ಕಿತ್ತಿದ್ದಕ್ಕೆ ಬಾಲಕನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯ ಪಥ್ರೂ ಗ್ರಾಮದಲ್ಲಿ ನಡೆದಿದೆ.

ಸತ್ಯಮ್ ಕುಮಾರ್ (10) ಮೃತ ಬಾಲಕನಾಗಿದ್ದಾನೆ. ಬಾಲಕ ಮೂಲತಃ ಶೇರ್ಗರ್ ಗ್ರಾಮದ ನಿವಾಸಿಯಾಗಿದ್ದು, ಗುರುವಾರ ತನ್ನ ಸ್ನೇಹಿತರ ಒಟ್ಟಿಗೆ ಆಟವಾಡಲು ಪಾಥ್ರೂ ಗ್ರಾಮದ ಬಳಿಯಿರುವ ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಬಾಲಕರು ಮಾವಿನಹಣ್ಣನ್ನು ಕಿತ್ತಿದ್ದಾರೆ.

ಮಾವಿನಹಣ್ಣು ಕಿತ್ತಿದ್ದಕ್ಕೆ ತೋಟದ ಕಾವಲುಗಾರ ಮಕ್ಕಳ ಮೇಲೆಯೇ ಗುಂಡು ಹಾರಿಸಿದ್ದಾನೆ. ಪರಿಣಾಮ ಸತ್ಯಮ್ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಲೆ ಕಾವಲುಗಾರ ಸ್ಥಳದಿಂದ ಪರಾರಿಯಾಗಿದ್ದಾನೆ.

ಬರೋಹ್ ಚೌದರಿ ಎಂಬವರ ತೋಟದ ಕಾವಲುಗಾರ ರಾಮಶೀಶ್ ಯಾದವ್ (43) ಮಗನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಗೋಗ್ರಿ ಠಾಣೆಯಲ್ಲಿ ಬಾಲಕನ ತಂದೆ ದೂರು ನೀಡಿದ್ದಾರೆ.

ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಗೋಗ್ರಿ ಠಾಣಾ ಪೊಲೀಸರು, ಮಾವಿನ ತೋಟದಲ್ಲಿ ಬಾಲಕನ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೇ ಪರಾರಿಯಾದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಸೆರೆಗೆ ಪೊಲೀಸರು ಬಲೆ ಬೀಸಿದ್ದು, ಹೆಚ್ಚಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *