ಮಣ್ಣಿನ ದಿಬ್ಬ ಕುಸಿತ – 10 ಮಹಿಳಾ ಕಾರ್ಮಿಕರ ದುರ್ಮರಣ

Public TV
1 Min Read

ಹೈದರಾಬಾದ್: ಕೆಲಸ ಮಾಡುತ್ತಿದ್ದಾಗ ಮಣ್ಣಿನ ದಿಬ್ಬ ಕುಸಿದ ಪರಿಣಾಮ ಹತ್ತು ಮಂದಿ ಮಹಿಳಾ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ನಾರಾಯಣಪೇಟ್‍ ನಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ಮರಿಕಲ್ ಮಂಡಲದ ತಿಲೆರು ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಮೃತ ಮಹಿಳೆಯರನ್ನು ಅನುರಾಧಾ(30), ಭೀಮಮ್ಮ(40), ಬುಡಮ್ಣ(20), ಬಿ.ಲಕ್ಷ್ಮೀ(28), ಕೆ.ಲಕ್ಷ್ಮಿ(30), ಮಂಗಮ್ಮ(32), ಅನಂತಮ್ಮ(45), ಕೇಶಮ್ಮ(40), ಬಿ.ಅನಂತಮ್ಮ(35) ಹಾಗೂ ಲಕ್ಷ್ಮಿ(28) ಎಂದು ಗುರುತಿಸಲಾಗಿದೆ.

ತಿಲೆರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಣ್ಣಿನ ದಿಬ್ಬವನ್ನು ಅಗೆಯುವ ಕಾರ್ಯ ನಡೆಯುತಿತ್ತು. ಇಲ್ಲಿ ಅನೇಕ ಸ್ಥಳೀಯ ಜನರು ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಮಣ್ಣಿನ ದಿಬ್ಬ ಕುಸಿದು ಬಿದ್ದಿದೆ. ಪರಿಣಾಮ ಯಾರು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಹೀಗಾಗಿ ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮರಿಕಲ್ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಐವರು ಕಾರ್ಮಿಕರು ಪಾರಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಸ್ಥಳೀಯರ ಸಹಾಯದಿಂದ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳದಲ್ಲಿ ಮೃತ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಈ ದಾರುಣ ಘಟನೆಯ ಬಗ್ಗೆ ಮಾಹಿತಿ ತಿಳಿದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆ ಅಧಿಕಾರಿಗೆ ಮತ್ತೆ ಈ ರೀತಿ ಆಗದಂತೆ ಮುಂಜಾಗೃತ ಕ್ರಮವಹಿಸುವಂತೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *