ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಸೇವೆ ಮಾಡಲು ನೇಮಕವಾಗಿದ್ರು 10 ಜನ!

Public TV
2 Min Read

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿಯ (Delhi) ಸಚಿವ, ಆಮ್ ಆದ್ಮಿ ಪಕ್ಷದ (AAP) ನಾಯಕ ಸತ್ಯೇಂದ್ರ ಜೈನ್ (Satyendar Jain) ಅವರಿಗೆ ತಿಹಾರ್ ಜೈಲಿನಲ್ಲಿ (Tihar Jail) ವಿವಿಐಪಿ ಸೌಕರ್ಯ ನೀಡಿರುವ ವೀಡಿಯೋಗಳು ಹೊರಬಂದಿತ್ತು. ಇದೀಗ ಅವರಿಗೆ ಜೈಲಿನಲ್ಲಿ ಒಟ್ಟು 10 ಜನರನ್ನು ಸೇವೆ ಒದಗಿಸಲೆಂದೇ ನಿಯೋಜಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಸತ್ಯೇಂದ್ರ ಜೈನ್ ಅವರ ಅಗತ್ಯಗಳನ್ನು ನೋಡಿಕೊಳ್ಳಲು, ಅವರ ಕೋಣೆಯನ್ನು ಸ್ವಚ್ಛಗೊಳಿಸಲು, ಹಾಸಿಗೆಯನ್ನು ಮಡಚಲು, ಹೊರಗಿನ ಆಹಾರ, ಮಿನರಲ್ ವಾಟರ್, ಹಣ್ಣು, ಬಟ್ಟೆ ಹೀಗೆ ಹಲವು ವಸ್ತುಗಳನ್ನು ಒದಗಿಸಲು 8 ಜನರನ್ನು ನಿಯೋಜಿಸಲಾಗಿದ್ದು, ಇನ್ನೂ ಇಬ್ಬರು ಅವರ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಸತ್ಯೇಂದ್ರ ಜೈನ್ ತಮಗೆ ಜೈಲಿನಲ್ಲಿ ವಿಶೇಷ ಸೌಕರ್ಯ, ಆಹಾರ ಸಿಗುತ್ತಿರುವ ವಿಚಾರ ಬಯಲಿಗೆ ಬರುತ್ತಿದ್ದಂತೆಯೇ ಅವರು ವಿಶೇಷ ಆಹಾರವನ್ನು ಕೋರಿ ಸಲ್ಲಿಸಿದ್ದ ಮನವಿಯನ್ನು ರೋಸ್ ಅವೆನ್ಯೂ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸಿ – ಗಿರಿರಾಜ್ ಸಿಂಗ್

ಸತ್ಯೇಂದ್ರ ಜೈನ್ ತಮ್ಮ ಮನವಿಯಲ್ಲಿ, ನಾನು ದೇವಾಲಯಕ್ಕೆ ಹೋಗದೇ ಆಹಾರವನ್ನು ಸೇವಿಸುವುದಿಲ್ಲ. ಇಲ್ಲಿ ತಮಗೆ ಜೈನ ಆಹಾರ ಹಾಗೂ ದೇವಾಲಯಕ್ಕೆ ಹೋಗಲು ಅನುಮತಿಯಿಲ್ಲ. ನಾನು ಧಾರ್ಮಿಕ ಆಚರಣೆ ವೇಳೆ ಹಣ್ಣು ಹಾಗೂ ತರಕಾರಿಗಳನ್ನು ಮಾತ್ರವೇ ಸೇವಿಸುತ್ತಿದ್ದು, ಕೆಲವು ದಿನಗಳಿಂದ ನನಗೆ ಅದು ಕೂಡ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಜೈಲಿನಲ್ಲಿ ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಪಡೆಯಲು ಜೈನ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ವಜಾಗೊಳಿಸಿದ್ದಾರೆ. ಇದಲ್ಲದೆ ಜೈನ್‌ಗೆ ರಿಂಕು ಎಂದು ಗುರುತಿಸಲಾದ ಅತ್ಯಾಚಾರ ಆರೋಪಿ ಮಸಾಜ್ ಮಾಡಿರುವುದು ತಿಳಿದುಬಂದಿದೆ. ಇದೀಗ ಜೈನ್‌ಗೆ ಸೇವೆ ನೀಡಲು ನಿಯೋಜಿಸಲಾಗಿದ್ದ 10 ಜನರು ಅದೇ ಜೈಲಿನಲ್ಲಿದ್ದ ಕೈದಿಗಳಾ ಅಥವಾ ಹೊರಗಿನವರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುತ್ತೆ.. ಧೈರ್ಯವಿದ್ರೆ ನಿಲ್ಲಿಸಿ – ದೀದಿಗೆ ಬಿಜೆಪಿ ಸವಾಲು

ಮೇ ತಿಂಗಳಲ್ಲಿ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು. ಬಳಿಕ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *