10 ದಿನ ಧಾರವಾಡ ಜಿಲ್ಲೆ ಲಾಕ್‍ಡೌನ್: ಜಗದೀಶ್ ಶೆಟ್ಟರ್

Public TV
1 Min Read

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯನ್ನು 10 ದಿನಗಳ ಕಾಲ ಲಾಕ್‍ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.

ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಬಗ್ಗೆ ಮಾತನಾಡಿದ ಸಚಿವರು, ಜುಲೈ 15ರ ಬೆಳಗ್ಗೆ 10 ಗಂಟೆಯಿಂದ ಜುಲೈ 24ರ ರಾತ್ರಿ 8ವರೆಗೆ ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡುವುದಾಗಿ ತಿಳಿಸಿದರು.

11 ಜಿಲ್ಲೆಗಳ ಬಗ್ಗೆ ಚರ್ಚೆ ನಡೆದಿದೆ. ಧಾರವಾಡ ಜಿಲ್ಲೆಯ ಪರಿಸ್ಥಿತಿ ಏನಿದೆ ಎಂದು ಸಿಎಂ ಬಳಿ ಹೇಳಿದ್ದೇವೆ. ಪ್ರತಿ ದಿನ ಕೊರೊನಾ ಪ್ರಕರಣಗಳ ಪತ್ತೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಮರಣ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಬೇರೆ ಜಿಲ್ಲೆಯವರು ಕೂಡ ಇದ್ದಾರೆ. ಬೇರೆ ಜಿಲ್ಲೆಯಲ್ಲಿಯ ರೋಗಿಗಳು ಕಿಮ್ಸ್ ಗೆ ಬರುತ್ತಿದ್ದಾರೆ ಎಂದು ಸಿಎಂ ಮುಂದೆ ಹೇಳಿದ್ದೇವೆ ಎಂದು ಹೇಳಿದರು.

ಜನರಲ್ಲಿ ನಿರ್ಲಕ್ಷ್ಯ ಭಾವನೆ ಬಂದಿದೆ. ಅದಕ್ಕೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇದ್ದೇವೆ ಎಂದ ಅವರು, ಮದುವೆಗೆ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಜನರು ಹಾಗೂ ಸಂಘ ಸಂಸ್ಥೆಗಳೂ ಸೇರಿ ಹಲವರು ಸ್ವಲ್ಪ ಮಟ್ಟಿಗೆ ಲಾಕ್ ಡೌನ್ ಮಾಡಿ ಎಂದು ಹೇಳಿದ್ದಾರೆ. ಅದಕ್ಕೆ ಸಿಎಂ ಮುಂದೆ ಈ ಪ್ರಸ್ತಾಪ ಇಟ್ಟಿದ್ದೇವೆ. ಅನುಮತಿ ಕೂಡ ಕೇಳಿದೆವು. ಈ ವೇಳೆ ಸಿಎಂ, ಜಿಲ್ಲಾಡಳಿತದ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರು. ಹೀಗಾಗಿ ಲಾಕ್‍ಡೌನ ನಿರ್ಧಾರ ಕೈಗೊಂಡಿರುವುದಾಗಿ ಶೆಟ್ಟರ್ ಹೇಳಿದರು.

ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಲಿದ್ದಾರೆ ಎಂದ ಅವರು, ಜನರು ಸಹಕಾರ ಕೊಡಬೇಕು, ಅದಕ್ಕಾಗಿ ನಾವು ವಿನಂತಿ ಮಾಡ್ತೆನೆ. ಲಾಕ್‍ಡೌನ್ ಯಶಸ್ವಿಯಾಗಬೇಕು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *