1 ಲಕ್ಷ ಪರಿಹಾರಕ್ಕಾಗಿ ನಕಲಿ ಕೊರೊನಾ ರಿಪೋರ್ಟ್ – ಇಬ್ಬರ ಅರೆಸ್ಟ್

Public TV
2 Min Read

ಬಾಗಲಕೋಟೆ: ಕೋವಿಡ್ ನಿಂದ ಮೃತಪಟ್ಟವರಿಗೆ ಸರ್ಕಾರ ಒಂದು ಲಕ್ಷ ರೂ. ಪರಿಹಾರ ಘೋಷಣೆ ಹಿನ್ನೆಲೆ ಬಾಗಲಕೋಟೆಯಲ್ಲಿ ನಕಲಿ ಆರ್‍ಟಿಪಿಸಿಆರ್ ವರದಿ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾಸ್ಪತ್ರೆ ಇಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ, ಇದೀಗ ತನಿಖೆ ಕೈಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲಾಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಹಾಗೂ ಸಿಟಿ ಸ್ಕ್ಯಾನ್ ಸ್ಟಾಪ್ ನರ್ಸ್ ಸೇರಿ ಪಾಸ್ ವರ್ಡ್ ದುರ್ಬಳಕೆ ಮಾಡಿಕೊಂಡು ನಕಲಿ ಕೋವಿಡ್ ರಿಪೋರ್ಟ್ ತಯಾರಿಸಿದ್ದಾರೆ.

ಎರಡು ತಿಂಗಳು ಹಿಂದೆ ಸತ್ತ ಮಹಿಳೆಗೆ ಇದೀಗ ಆರ್ ಟಿಪಿಸಿಆರ್ ಪಾಸಿಟಿವ್ ರಿಪೋರ್ಟ್ ತಯಾರಿಸಿ ಗೋಲ್ ಮಾಲ್ ಮಾಡಿ ಸಿಕ್ಕು ಬಿದ್ದಿದ್ದಾರೆ. ಸಿಟಿ ಸ್ಕ್ಯಾನ್ ಸೆಂಟರ್ ನ ಸ್ಟಾಪ್ ನರ್ಸ್ ಬಸವರಾಜ್ ಬಿಲಕೇರಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಬಸನಗೌಡ ಗಿರಿಯಪ್ಪಗೌಡರ ಸಿಕ್ಕಿಬಿದ್ದ ಆರೋಪಿಗಳಾಗಿದ್ದು, ಇಬ್ಬರ ವಿರುದ್ಧ ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಮೇ 2 ರಂದು ಮುಧೋಳ ತಾಲೂಕಿನ ಬಿದರಿ ಗ್ರಾಮದ 53 ವರ್ಷದ ಶೇಖವ್ವ ರೂಗಿ ಉಸಿರಾಟದ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಿಟಿ ಸ್ಕ್ಯಾನ್ ನಲ್ಲಿ ನ್ಯೂಮೋನಿಯಾ ಜೊತೆಗೆ ಕೋವಿಡ್ ಲಕ್ಷಣವಿತ್ತು. ಈ ವೇಳೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿರಲಿಲ್ಲ. ಇದೀಗ ಸರ್ಕಾರ ಕೋವಿಡ್ ನಿಂದ ಸತ್ತ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದು, ಆರ್ ಟಿಸಿ ಆರ್ ರಿಪೋರ್ಟ್ ಕಡ್ಡಾಯವಿದೆ. ಹೀಗಾಗಿ ಸರ್ಕಾರದ ಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಮೇ 1 ರಂದು ಗಂಟಲು ದ್ರವ ಮಾದರಿ ಸಂಗ್ರಹಣೆ ಎಂದು ದಾಖಲೆ ಸೃಷ್ಟಿಸಿದ್ದು, ಅದರ ಆರ್ ಟಿಪಿಸಿಆರ್ ವರದಿ ಜುಲೈ 15 ರಂದು ಪಾಸಿಟಿವ್ ಎಂದು ನಮೂದಿಸಿದ್ದರಿಂದ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಆಸ್ಪತ್ರೆ ಹಿರಿಯ ಅಧಿಕಾರಿಗಳು ತಪಾಸಣೆ ಮಾಡಿದಾಗ ಗೋಲ್ ಮಾಲ್ ಬಹಿರಂಗವಾಗಿದ್ದು, ಡಾಟಾ ಎಂಟ್ರಿ ಆಪರೇಟರ್ ಯೂಜರ್ ಐಡಿ, ಪಾಸ್ ವರ್ಡ್ ದುರುಪಯೋಗ ಪಡಿಸಿಕೊಂಡು ಕೋವಿಡ್ ಪಾಸಿಟಿವ್ ಎಂದು ಎಂಟ್ರಿ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಇದೀಗ ಪೊಲೀಸರು ಸರ್ಕಾರಕ್ಕೆ ಮೋಸ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಠಾಣೆ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿರುವುದಾಗಿ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಪ್ರಕಾಶ್ ಬಿರಾದಾರ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಭಾರೀ ಮಳೆ – ಗೋಡೆ ಕುಸಿದು 11 ಮಂದಿ ಸಾವು

Share This Article
Leave a Comment

Leave a Reply

Your email address will not be published. Required fields are marked *