ಹ್ಯಾರಿಸ್ ಮಾತು ಕೇಳಿ ಕಕ್ಕಾಬಿಕ್ಕಿಯಾದ ಸಿದ್ದರಾಮಯ್ಯ

Public TV
1 Min Read

ಏ ಕಷಾಯ ತರಿಸು, ಮಾತ್ರೆ ತಾ
– ಕಾಂಗ್ರೆಸ್‌ ಸಭೆ ನಡೆಯುತ್ತಿದ್ದಾಗ ಬಂತು ಮೆಸೇಜ್‌

ಬೆಂಗಳೂರು: ಶಾಂತಿನಗರದ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮಾತು ಕೇಳಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಚ್ಚಿ ಬಿದ್ದ ಪ್ರಸಂಗ ನಡೆದಿದೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸುವ ಮೊದಲು ಹ್ಯಾರಿಸ್‌ ಅವರು ಕೋವಿಡ್‌ 19 ಪರೀಕ್ಷೆ ಸಂಬಂಧ ಗಂಟಲ ದ್ರವವನ್ನು ನೀಡಿದ ಬಳಿಕ ಪಾಲ್ಗೊಂಡಿದ್ದರು.

ಮಧ್ಯಾಹ್ನ ಊಟ ಮಾಡಿದ ನಂತರ ಹ್ಯಾರಿಸ್‌ ಅವರ ಮೊಬೈಲಿಗೆ ಕೊರೊನಾ ಪಾಸಿಟಿವ್‌ ಬಂದಿರುವ ಮೆಸೇಜ್‌ ಬಂದಿದೆ. ಮೆಸೇಜ್‌ ಬಂದಿರುವುದನ್ನು ನೋಡಿದ ಹ್ಯಾರಿಸ್‌ ನನಗೆ ಕೊರೊನಾ ಬಂದಿದೆ. ನಾನು ಸಭೆಯಿಂದ ತೆರಳುತ್ತೇನೆ ಎಂದು ಹೇಳಿ ಹೋಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಸೇರಲು ಮುಂದಾಗಿದ್ರಾ ರಾಗಿಣಿ? – ಕೆಪಿಸಿಸಿ ಚರ್ಚೆಯ ಇನ್‌ಸೈಡ್‌ ಸ್ಟೋರಿ

ಹ್ಯಾರಿಸ್ ಮಾತು ಕೇಳಿ ಕೈ ನಾಯಕರುಗಳು ಹಾಗೂ ಶಾಸಕರುಗಳು ಒಮ್ಮೆ ಕಕ್ಕಾಬಿಕ್ಕಿಯಾಗಿದ್ದಾರೆ. ಮೆಸೇಜ್‌ ಬರುವ ಮೊದಲು ಸಿದ್ದರಾಮಯ್ಯ ಸಮೀಪ ಬಂದ ಹ್ಯಾರಿಸ್ ಕಿವಿಯಲ್ಲಿ ಗುಟ್ಟು ಹೇಳಿದ್ದರು.

ಹ್ಯಾರಿಸ್ ಪಾಸಿಟಿವ್ ಅಂತ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದ ಸಿದ್ದರಾಮಯ್ಯ, ಅಯ್ಯೋ ಅವನ, ಇಲ್ಲಿ ಬಂದು ಏನೋ ಮಾತಾಡಿ ಹೋದ್ನಲ್ಲ. ಏ ಕಷಾಯ ತರಿಸು, ಮಾತ್ರೆ ಇರಬೇಕು ತರಿಸು ಎಂದು ಶಾಸಕ ಬೈರತಿ ಸುರೇಶ್‌ಗೆ ಸೂಚಿಸಿದ್ದಾರೆ.

ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಬಂದ ಬಳಿಕ ಸಿದ್ದರಾಮಯ್ಯನವರಿಗೂ ಸೋಂಕು ಬಂದಿತ್ತು. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಆಗಸ್ಟ್‌ 13 ರಂದು ಡಿಸ್ಚಾರ್ಜ್‌ ಆಗಿದ್ದರು.

ಡಿಸ್ಚಾರ್ಜ್‌ ಬಳಿಕ ಸಿದ್ದರಾಮಯ್ಯ ಎಲ್ಲರ ಜೊತೆ ಅಂತರ ಕಾಯ್ದುಕೊಂಡೇ ಇರುತ್ತಿದ್ದರು. ಮನೆಯಲ್ಲೇ ಸಭೆ ನಡೆಸದೇ ಹೊರಗಡೆ ನಡೆಸುತ್ತಿದ್ದಾರೆ. ಮನೆಯಲ್ಲಿದ್ದರೂ ಮತ್ತು ಹೊರಗಡೆ ಹೋದಾಗಲೂ ಕೈಗೆ ಗ್ಲೌಸ್‌, ಮುಖಕ್ಕೆ ಫೇಸ್‌ ಮಾಸ್ಕ್‌ ಧರಿಸಿಕೊಂಡೇ ಓಡಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *