ಹೊಸ ಜೀವನ ಆರಂಭಿಸಬೇಕಾದ ಜೋಡಿ ಆತ್ಮಹತ್ಯೆಗೆ ಶರಣು

Public TV
1 Min Read

– ಮದುವೆ ದಿನವೇ ಸೂಸೈಡ್

ಹೈದರಾಬಾದ್: ಹೊಸಬಾಳು ಆರಂಭಿಸಬೇಕಾದ ಜೋಡಿ ಮದುವೆಯ ದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಸುಂದರ್ಯ ಕಾಲನಿಯಲ್ಲಿ ನಡೆದಿದೆ.

ಮೃತರನ್ನು ಬಿ.ಅವಿನಾಶ್ (33) ಮತ್ತು ಎಂ.ನಾಗಮಣಿ ಎಂದು ಗುರುತಿಸಲಾಗಿದೆ. ನಾಗಮಣಿ ಕೆಲವುದಿನಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡಿದ್ದಳು. ನಂತರ ಅವಿನಾಶ್‍ನೊಂದಿಗೆ ಸ್ನೇಹ ಬೆಳದಿತ್ತು. ಇಬ್ಬರು ಮದುವೆಯಾಗಬೇಕು ಎಂದುಕೊಂಡಿದ್ದರು, ಆದರೆ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುಜುವಾಕದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಅವಿನಾಶ್ ಮತ್ತು ನಾಗಮಣಿ ವಾಸವಾಗಿದ್ದರು. ಈ ಜೋಡಿ ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧಾರವನ್ನು ಮಾಡಿತ್ತು. ಆದರೆ ಮದುವೆಯಾಗಿ ಸುಖ ಸಂಸಾರ ನಡೆಸಬೇಕಿದ್ದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಿಂದ ಯಾರು ಹೊರಗೆ ಬರದೆ ಇರುವುದನ್ನು ಗಮನಿಸಿದ ನೆರೆಹೊರೆಯವರು ಅನುಮಾನದಿಂದ ಮನೆಯ ಹತ್ತಿರ ಹೋಗಿ ನೋಡಿದಾಗ ಇಬ್ಬರು ಮೃತಪಟ್ಟಿರುವುದು ತಿಳಿದಿದೆ. ನಂತರ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

ಈ ಜೋಡಿಯ ಆತ್ಮಹತ್ಯೆ ಪ್ರಕರಣ ಗಜುವಾಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಡೆತ್‍ನೋಟ್ ಮನೆಯಲ್ಲಿ ಪತ್ತೆಯಾಗಿಲ್ಲ. ಆದರೆ ಮೊಬೈಲ್‍ನಲ್ಲಿ ದೊರಕಿರುವ ಹಲವು ಮಾಹಿತಿಗಳ ಪ್ರಕಾರ ಇಬ್ಬರ ಮದುವೆಗೆ ಕುಟುಂಬ ನಿರಾಕರಿಸಿದ್ದಕ್ಕಾಗಿ ಹೀಗೆ ಮಾಡಿಕೊಂಡಿದ್ದಾರ ಎಂಬ ಶಂಕೆ ವ್ಯಕ್ತವಾಗಿದೆ.

ಇಬ್ಬರು ಬೇರೆ ಜಾತಿಯಾಗಿದ್ದರಿಂದ ಮದುವೆಗೆ ಎರಡು ಕುಟುಂಬದ ವಿರೋಧವಿತ್ತು. ಅಲ್ಲದೇ ನಾಗಮಣಿ ವಿಧವೆ ಎಂದು ಅವಿನಾಶ್ ಕುಟುಂಬದವರು ವಿರೋಧ ವ್ಯಕ್ತ ಪಡಿಸಿದ್ದರು. ಯಾರು ಮದುವೆಗೆ ಒಪ್ಪುವುದಿಲ್ಲ ಎಂದು ಮನನೊಂದು ಈ ಜೋಡಿ ಆತ್ಮಹತ್ಯೆಗೆ ಶರಣಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *