ಹೊರರಾಜ್ಯದಿಂದ ಬಂದವರ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ- ಪೊಲೀಸರಿಂದ ಲಘು ಲಾಠಿ ಪ್ರಹಾರ

Public TV
1 Min Read

– ಕಣ್ಣೀರಿಡುತ್ತಾ ಮನೆಗೆ ತೆರಳಿದ ಉಪಮೇಯರ್

ಶಿವಮೊಗ್ಗ: ಮಹಾನಗರ ಪಾಲಿಕೆ ಉಪಮೇಯರ್ ಅವರೇ ಹೊರ ರಾಜ್ಯದಿಂದ ಬಂದವರ ಕ್ವಾರಂಟೈನ್‍ಗೆ ಅಡ್ಡಿಪಡಿಸಿರುವ ಘಟನೆ  ನಗರದಲ್ಲಿ ನಡೆದಿದೆ. ಪಾಲಿಕೆ ಉಪಮೇಯರ್ ಸುರೇಖಾ ಮುರಳೀಧರ್ ಅವರೇ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲು ಸ್ಥಳೀಯರ ಜೊತೆ ಸೇರಿ ಅಡ್ಡಿಪಡಿಸಿದ್ದಾರೆ.

ಬಾಪೂಜಿನಗರದಲ್ಲಿ ಈಗಾಗಲೇ ಎರಡು ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದ್ದು, ಈಗ ಮತ್ತೊಂದು ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ಹೊರಟಿದ್ದಾರೆ. ಇಂದು ಸಹ ಅಧಿಕಾರಿಗಳು ಇಲ್ಲಿನ ಕೃಷ್ಣಪ್ಪ ಹಾಸ್ಟೆಲ್‍ಗೆ ಮಹಾರಾಷ್ಟ್ರದಿಂದ ಬಂದ 12 ಮಂದಿಯನ್ನು ಬಸ್ಸಿನಲ್ಲಿ ಕರೆತಂದ ವೇಳೆ ಸ್ಥಳೀಯರು ಹಾಗೂ ಪಾಲಿಕೆ ಉಪಮೇಯರ್ ಸುರೇಖಾ ಮುರಳೀಧರ್ ಕ್ವಾರಂಟೈನ್ ಮಾಡಲು ಅಡ್ಡಿ ಪಡಿಸಿದ್ದರು. ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸಹ ನಿರ್ಮಾಣವಾಗಿತ್ತು.

ಉಪಮೇಯರ್ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳ ವಿರೋಧಪಡಿಸಿದ್ದು, ಪೊಲೀಸರು ಮತ್ತು ಸ್ಥಳೀಯರ ನಡುವೇ ವಾಗ್ವಾದ ಕೂಡ ಉಂಟಾಯಿತು. ನಂತರ ಹಾಸ್ಟೆಲ್ ಒಳಗೆ ನುಗ್ಗಿದ ಸ್ಥಳೀಯರು ಹಾಸ್ಟೆಲ್‍ನಲ್ಲಿದ್ದ ಕುರ್ಚಿ, ಟೇಬಲ್ ಎತ್ತಿ ಹಾಕಿ ದಾಂಧಲೆ ಕೂಡ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಸ್ಥಳೀಯರನ್ನು ಸಮಾಧಾನಗೊಳಿಸಿ ಮನೆಗೆ ಕಳಿಸಲು ಯತ್ನಿಸಿದರು ಕೂಡ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಹೀಗಾಗಿ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು. ಸದ್ಯ ಹಾಸ್ಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳೀಯರು ಹಾಗೂ ಉಪಮೇಯರ್ ವಿರೋದಧ ನಡುವೆಯೂ ಪೊಲೀಸರು ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲು ಯಶಸ್ವಿಯಾದರು. ವಿರೋಧದ ನಡುವೆಯೂ ಕ್ವಾರಂಟೈನ್ ಮಾಡಿದ್ದಕ್ಕೆ ಉಪಮೇಯರ್ ಸುರೇಖಾ ಅವರು ಕಣ್ಣೀರು ಹಾಕುತ್ತಾ ಮನೆಯತ್ತ ತೆರಳಿದರು.

Share This Article
Leave a Comment

Leave a Reply

Your email address will not be published. Required fields are marked *