ಹೈದರಾಬಾದ್ ಪ್ರವಾಹ- ಮಹೇಶ್ ಬಾಬು, ಎನ್‍ಟಿಆರ್, ಚಿರಂಜೀವಿ ಬಳಿಕ ಭಾರೀ ಮೊತ್ತ ನೀಡಿದ ಪ್ರಭಾಸ್

Public TV
2 Min Read

ಹೈದರಾಬಾದ್: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹೈದರಾಬಾದ್ ಸೇರಿದಂತೆ ತೆಲಂಗಾಣದ ಹಲವು ಪ್ರದೇಶಗಳು ನಲುಗಿ ಹೋಗಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಪರಿಸ್ಥಿತಿ ಅರಿತ ಹಲವು ಗಣ್ಯರು ಸಹಾಯ ಹಸ್ತ ಚಾಚುತ್ತಿದ್ದು, ಟಾಲಿವುಡ್ ನಟರಾದ ಮಹೇಶ್ ಬಾಬು, ಜೂನಿಯರ್ ಎನ್‍ಟಿಆರ್, ಚಿರಂಜೀವಿ ಬಳಿಕ ಇದೀಗ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಭಾರೀ ಮೊತ್ತದ ಕೊಡುಗೆ ನೀಡಿದ್ದಾರೆ.

ಹೈದರಾಬಾದ್‍ನಲ್ಲಿ ಉಂಟಾದ ಪ್ರವಾಹದಿಂದಾಗಿ 37 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ಅರಿತ ಟಾಲಿವುಡ್‍ನ ಹಲವು ನಟ, ನಟಿಯರು ಹಾಗೂ ಗಣ್ಯರು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ನೀಡುತ್ತಿದ್ದು, ಇದೀಗ ಪ್ರಭಾಸ್ 1.5 ಕೋಟಿ ರೂ. ಗಳನ್ನು ನೀಡಿದ್ದಾರೆ.

ಹೈದರಾಬಾದ್ ಪ್ರವಾಹದಿಂದಾಗಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದ್ದು, ಜನರ ಜೀವನವನ್ನು ಸಹಜ ಸ್ಥಿತಿಗೆ ತರಲು ಮಹಾನಗರ ಪಾಲಿಕೆ ಹಾಗೂ ವಿಪತ್ತು ನಿರ್ವಹಣಾ ತಂಡಗಳು ದಣಿವರಿಯದೆ ಕೆಲಸ ಮಾಡುತ್ತಿವೆ. ಇದರ ಮಧ್ಯೆ ನಟ, ನಟಿಯರು ಸಹ ಸಹಾಯ ಮಾಡುತ್ತಿದ್ದಾರೆ.

ಪ್ರಭಾಸ್ ಪರಿಹಾರ ಹಣ ನೀಡಿರುವ ಕುರಿತು ಸೌತ್ ಫಿಲ್ಮ್ ಇಂಡಸ್ಟ್ರಿ ಪಿಆರ್ ಒ ಹಾಗೂ ನಿರ್ಮಾಪಕ ಬಿ.ಎ.ರಾಜು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಹೈದರಾಬಾದ್ ಪ್ರವಾಹ ಸಂತ್ರಸ್ತರಿಗಾಗಿ ಪ್ರಭಾಸ್ 1.5 ಕೋಟಿ ರೂಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಪ್ರಭಾಸ್ ಪರಿಹಾರ ಹಣ ನೀಡಿರುವುದು ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಸಹ ಬಾಹುಬಲಿ ನಟ ಇತ್ತೀಚೆಗೆ 1 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರು. ಈ ವೇಳೆ ಸಹ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರು ಮಾತ್ರವಲ್ಲ ಮಹೇಶ್ ಬಾಬು, ಜೂನಿಯರ್ ಎನ್‍ಟಿಆರ್, ನಾಗಾರ್ಜುನ, ಚಿರಂಜೀವಿ ಅವರು ಸಹ ಪರಿಹಾರ ನೀಡಿದ್ದರು.

ಮಹೇಶ್ ಬಾಬು 1 ಕೋಟಿ ರೂ., ಜೂನಿಯರ್ ಎನ್‍ಟಿಆರ್ 50 ಲಕ್ಷ ರೂ., ನಾಗಾರ್ಜುನ ಹಾಗೂ ಚಿರಂಜೀವಿ ಸಹ ತಲಾ 50 ಲಕ್ಷ ಹಾಗೂ 1 ಕೋಟಿ ರೂ.ಗಳನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *