ಹೇರ್ ಕಟಿಂಗ್ ಮಾಡಿದ್ದಕ್ಕೆ ಶಿಕ್ಷೆ – 50 ಸಾವಿರ ದಂಡದ ಜೊತೆ ಸಾಮಾಜಿಕ ಬಹಿಷ್ಕಾರ!

Public TV
1 Min Read

– ಆರೋಪಿಗಳ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್ ಸೂಚನೆ

ಮೈಸೂರು: ವಂಶಪಾರಂಪರ್ಯವಾಗಿ ಗ್ರಾಮದಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವ ಏಕೈಕ ಕುಟುಂಬವೊಂದಕ್ಕೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಅಲ್ಲದೆ 50 ಸಾವಿರ ದಂಡ ಕಟ್ಟುವಂತೆ ಆದೇಶ ಹೊರಡಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೌದು. ಹಲ್ಲರೆ ಗ್ರಾಮದ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬಸ್ಥರಿಗೆ ಈ ಶಿಕ್ಷೆ ನೀಡಲಾಗಿದೆ. ಈ ಮೂಲಕ ನಂಜನಗೂಡಿನ ಹಲ್ಲರೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಾಗಿರುವಂತೆ ಕಾಣುತ್ತಿದೆ.

ಗ್ರಾಮದ ಚನ್ನನಾಯಕ ಮತ್ತು ಸಹಚರರು ಮಲ್ಲಿಕಾರ್ಜುನ ಅವರಿಗೆ ಹಲ್ಲರೆ ಗ್ರಾಮದ ಪರಿಶಿಷ್ಟ ಜಾತಿ ವರ್ಗದವರಿಗೆ ಕಟಿಂಗ್ ಮತ್ತು ಶೇವಿಂಗ್ ಮಾಡಬಾರದೆಂದು ನಿರ್ಬಂಧ ಹಾಕಿದ್ದರು. ಆದರೆ ಮಲ್ಲಿಕಾರ್ಜುನ ಅವರು ಗ್ರಾಮದ ಮುಖಂಡರ ಆದೇಶ ಧಿಕ್ಕರಿಸಿ ಪರಿಶಿಷ್ಠ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮಾಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಚೆನ್ನನಾಯಕ ಮತ್ತು ಸಹಚರರು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಮೂಲಕ ಜಾತಿ ತಾರತಮ್ಯವಿಲ್ಲದೆ ಕಸುಬಿನಲ್ಲಿ ತೊಡಗಿದ್ದ ಕುಟುಂಬಕ್ಕೆ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ 50 ಸಾವಿರ ದಂಡ ಕಟ್ಟುವಂತೆ ಆದೇಶ ಕೂಡ ಹೊರಡಿಸಿದ್ದಾರೆ.

ಮಲ್ಲಿಕಾರ್ಜುನ ಶೆಟ್ಟಿ ಅವರು ಈಗಾಗಲೇ ಎರಡು ಬಾರಿ ದಂಡ ಕಟ್ಟಿದ್ದಾರೆ. ಇತ್ತ ಕಳೆದ 2 ತಿಂಗಳಿಂದ ನೊಂದ ಮಲ್ಲಿಕಾರ್ಜುನ ಕುಟುಂಬ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದೆ. ಅಲ್ಲದೆ ಸಾಮಾಜಿಕ ಬಹಿಷ್ಕಾರದಿಂದ ಆತ್ಮಹತ್ಯೆಯ ದಾರಿ ಹಿಡಿಯಲು ನಿರ್ಧಾರ ಮಾಡಿದ್ದು, ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್ ಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ತಹಶೀಲ್ದಾರ್ ಅವರು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *