ಹೆಣ್ಣು ನೋಡಲು ಬಂದು ಪ್ರೀತಿ ಮಾಡಿದ – ಪ್ರೀತಿಸಿ ಕೈಕೊಟ್ಟ ಯುವಕನಿಗಾಗಿ ಯುವತಿ ಹೋರಾಟ

Public TV
1 Min Read

ರಾಯಚೂರು: ಮದುವೆಗೆ ಹೆಣ್ಣು ನೋಡಲು ಬಂದು ಹುಡುಗಿಯನ್ನು ಪ್ರೀತಿಸಿ ಯುವಕ ಕೈಕೊಟ್ಟ ಹಿನ್ನೆಲೆ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಾಳೆ ಯುವಕ ಬೇರೆ ಯುವತಿಯೊಂದಿಗೆ ಮದುವೆಯಾಗುತ್ತಿರುವುದರಿಂದ ಮೋಸ ಹೋದ ರಾಯಚೂರು ತಾಲೂಕಿನ ಬಾಪೂರ ಗ್ರಾಮದ ಉಮೇಶಮ್ಮ ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾಳೆ.

ವಡವಟ್ಟಿ ಗ್ರಾಮದ ಯುವಕ ಮಲ್ಲೇಶ್ ಮೂರು ತಿಂಗಳ ಕೆಳಗೆ ಹೆಣ್ಣು ನೋಡಲು ಉಮೇಶಮ್ಮಳ ಮನೆಗೆ ಬಂದಿದ್ದ, ಎರಡು ಕುಟುಂಬದವರ ಮಧ್ಯೆ ಮಾತುಕತೆ ಪೂರ್ಣ ಆಗಿರಲಿಲ್ಲ. ಆಗಲೇ ಇಬ್ಬರ ಮಧ್ಯೆ ಪ್ರೇಮ ಬೆಳೆದು ದೈಹಿಕ ಸಂಬಂಧವನ್ನೂ ಹೊಂದಿದ್ದರು. ಆದರೆ ಈಗ ಯುವಕ ಬೇರೆ ಯುವತಿ ಜೊತೆ ಮದುವೆಗೆ ಮುಂದಾಗಿದ್ದಾನೆ. ಹೀಗಾಗಿ ಯುವತಿ ಹಾಗೂ ಯುವತಿಯ ಕುಟುಂಬಸ್ಥರು ನ್ಯಾಯಕ್ಕಾಗಿ ಎಸ್ಪಿ ಕಚೇರಿಗೆ ಬಂದಿದ್ದಾರೆ. ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲು ಮುಂದಾಗಿದ್ದಾರೆ. ಉಮೇಶ್ ಜೊತೆ ಮದುವೆ ಮಾಡಿಸುವಂತೆ ಯುವತಿ ಪೊಲೀಸರಿಗೆ ಒತ್ತಾಯಿಸಿದ್ದಾಳೆ.

ಮೇ 28 ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ನಾಪತ್ತೆಯಾಗಿದ್ದ ಯುವಕ ಯುವತಿ ಬೋಳಮಾನದೊಡ್ಡಿಯ ಗುಡ್ಡದಲ್ಲೇ ಕಾಲ ಕಳೆದಿದ್ದಾರೆ. ಮದುವೆಯಾಗುವಂತೆ ಮನವೊಲಿಸಲು ಉಮೇಶಮ್ಮ ನಡೆಸಿದ ಪ್ರಯತ್ನ ವಿಫಲವಾಗಿದೆ. ಅಲ್ಲದೆ ಪೊಲೀಸರು ಮದುವೆ ಮಾಡಿಸಿವುದಾಗಿ ಕರೆಸಿಕೊಂಡು ಅನ್ಯಾಯ ಮಾಡಿದ್ದಾರೆ ಅಂತ ಯುವತಿ ಆರೋಪ ಮಾಡಿದ್ದಾಳೆ.

ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತಿದ್ದ ಯುವಕ ಮಲ್ಲೇಶ್ ಇನ್ನೊಬ್ಬ ಯುವತಿ ಜೊತೆ ಮದುವೆ ನಿಶ್ಚಯವಾದ ಮೇಲೂ ಉಮೇಶಮ್ಮ ಜೊತೆ ಪ್ರೇಮ ಮುಂದುವರೆಸಿದ್ದ. ಈಗ ಯುವತಿಗೆ ಕೈ ಕೊಟ್ಟು ನಾಳೆ ಹಸೆಮಣೆ ಏರಲು ಸಜ್ಜಾಗಿದ್ದಾನೆ. ಇದಕ್ಕೆಲ್ಲಾ ಯುವಕನ ಸ್ನೇಹಿತ ನೇತಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವರಾಜ್ ಸಹಾಯ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *