ಹೆಗಲು ನೀಡಲು ಮುಂದೆ ಬಾರದ ಪುರುಷರು- ಹೆಣ್ಣು ಮಕ್ಕಳಿಂದಲೇ ತಾಯಿಯ ಅಂತ್ಯಸಂಸ್ಕಾರ

Public TV
1 Min Read

– ಮಾನವೀಯತೆ ಮರೆತ ಗ್ರಾಮಸ್ಥರು
– 4 ವರ್ಷದ ಹಿಂದೆ ಬಹಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬ

ರಾಂಚಿ: ತಾಯಿಯ ಅಂತ್ಯಸಂಸ್ಕಾರಕ್ಕೆ ಗ್ರಾಮದ ಪುರುಷರು ಮುಂದೆ ಬರದಿದ್ದಾಗ ಮಹಿಳೆಯ ಹೆಣ್ಣು ಮಕ್ಕಳೇ ಅಮ್ಮನ ಅಂತಿಮ ವಿಧಿವಿಧಾನ ಪೂರೈಸಿದ್ದಾರೆ. ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ಟಿಟಿಝರಿಯಾದ ಖಂಡ್ವಾ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಗಲಾಟೆಯಿಂದಾಗಿ ನಾಲ್ಕು ವರ್ಷಗಳ ಹಿಂದೆ ಕುಂತಿದೇವಿಯನ್ನ ಗ್ರಾಮದ ಮುಖಂಡರು ತಮ್ಮ ಜಾತಿಯಿಂದ ಬಹಿಷ್ಕಾರ ಹಾಕಿದ್ದರು. ನಾಲ್ಕು ವರ್ಷಗಳಿಂದಲೂ ಗ್ರಾಮಸ್ಥರು ಕುಂತಿದೇವಿ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಬಹಿಷ್ಕಾರ ಹಾಕಿದ್ದರಿಂದ ಕುಂತಿದೇವಿ ಪಂಚತತ್ವದಲ್ಲಿ ವಿಲೀನ ಆಗಿದ್ದರು. ಪತಿ ದಿನಗೂಲಿ ಮಾಡುತ್ತಿದ್ದು, ಎಂಟು ಹೆಣ್ಣು ಮಕ್ಕಳ ಪೈಕಿ ಏಳು ಜನರ ಮದುವೆ ಮಾಡಿದ್ದರು.

ಕಳೆದ ಕೆಲ ದಿನಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದ ಕುಂತಿದೇವಿ ಇಂದು ವಿಧಿವಶರಾಗಿದ್ದರು. ಆದ್ರೆ ಗ್ರಾಮಸ್ಥರು ಮಾನವೀಯತೆಗೂ ಕುಂತಿದೇವಿ ಮನೆಯತ್ತ ಬರದೇ ಸಮುದಾಯದ ಮುಖಂಡರ ಆದೇಶವನ್ನ ಪಾಲಿಸಿದ್ದಾರೆ. ಕೊನೆಗೆ ಪುತ್ರಿಯರೇ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರಕ್ಕೆ ಮುಂದಾದಾಗಲೂ ಗ್ರಾಮದ ಯಾವ ಪುರುಷನೂ ಹೆಗಲು ನೀಡಲು ಮುಂದೆ ಬರಲಿಲ್ಲ.

ಎಂಟು ಮಕ್ಕಳೇ ತಾಯಿಗೆ ಹೆಗಲು ನೀಡಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಕ್ಕಳು ಅಂತ್ಯಸಂಸ್ಕಾರ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗ್ರಾಮಸ್ಥರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *