ಹೆಂಡ್ತಿ ಮೇಲೆ ಕಣ್ಣು ಹಾಕ್ತಾನೆ ಅಂತ ಅಣ್ಣನನ್ನೇ ಕೊಂದ ತಮ್ಮ

Public TV
1 Min Read

– ಕೊಲೆ ಮಾಡಿ ಮನೆಯೊಳಗೆ ಹೋಗಿ ಮಲಗಿದ
– ಶರ್ಟ್ ಮೇಲಿದ್ದ ರಕ್ತದ ಕಲೆಗಳಿಂದ ಸಿಕ್ಕಿಬಿದ್ದ

ಚಿಕ್ಕಬಳ್ಳಾಪುರ: ಮಲಗಿದ್ದ ಸಹೋದರನ ಕುತ್ತಿಗೆಯನ್ನ ತಮ್ಮ ಮಧ್ಯರಾತ್ರಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಳೇ ಕುರಬರಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಆರೋಪಿ ಸುರೇಶ್ ಸಹೋದರ ರಮೇಶ್ (32)ನನ್ನು ಕೊಲೆ ಮಾಡಿದ್ದಾನೆ. ಮಂಗಳವಾರ ತಡರಾತ್ರಿ ಆರೋಪಿ ಸುರೇಶ್ ಸಹೋದರನ ಜೊತೆ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿಕೊಂಡಿದ್ದು, ಅಣ್ಣ ತಮ್ಮಂದಿರು ಗಲಾಟೆ ಮಾಡಿಕೊಂಡಿದ್ದರು. ತದನಂತರ ಮನೆಯ ಹೊರಭಾಗದ ಪಾಯಕಲ್ಲಿನ ಮೇಲೆ ಮಲಗಿದ್ದ ಅಣ್ಣನನ್ನು ಮಧ್ಯರಾತ್ರಿ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಯೊಳಗೆ ಹೋಗಿ ಆರೋಪಿ ಸುರೇಶ್ ಮಲಗಿದ್ದಾನೆ.

ಬೆಳಗ್ಗೆ ಪ್ರಕರಣ ಬಯಲಾಗಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ಸುರೇಶ್ ಸಹ ಮನೆಯಲ್ಲಿದ್ದು, ಪೊಲೀಸರ ಜೊತೆ ಬೇರೆ ಯಾರೋ ಮಾಡಿದ್ದಾರೆ ಅಂತ ಹೇಳಿದ್ದಾನೆ. ತಡರಾತ್ರಿ ಇಬ್ಬರ ಮಧ್ಯ ಗಲಾಟೆ ನಡೆದಿರುವ ಬಗ್ಗೆ ಪೊಲೀಸರು ತಿಳಿದುಕೊಂಡಿದ್ದಾರೆ. ಅಲ್ಲದೇ ಆರೋಪಿ ಸುರೇಶ್‍ನ ಬಿಳಿ ಟಿ-ಶರ್ಟ್ ಮೇಲಿದ್ದ ರಕ್ತದ ಕಲೆಗಳನ್ನು ಕಂಡು ಪೊಲೀಸರು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ತಮ್ಮ ಸುರೇಶ್ ಕೊಲೆ ಕೃತ್ಯವನ್ನು ಬಯಲು ಮಾಡಿದ್ದಾನೆ. ತನ್ನ ಹೆಂಡತಿಗೆ ಅಣ್ಣ ಸುರೇಶ್ ದೈಹಿಕ ಕಿರುಕುಳ ನೀಡುತ್ತಿದ್ದ. ಅದಕ್ಕೆ ಕೊಲೆ ಮಾಡಿದೆ ಅಂತ ಪೊಲೀಸರ ಬಳಿ ಹೇಳಿದ್ದಾನೆ. ಇನ್ನೂ ಮೃತ ರಮೇಶ್‍ಗೆ ಮದುವೆಯಾಗಿದೆ. ಆದರೆ ಹೆಂಡತಿ ನಾಲ್ಕು ವರ್ಷಗಳ ಹಿಂದೆಯೇ ಪತಿಯನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ.

ಗೌರಿಬಿದನೂರು ವೃತ್ತ ನಿರೀಕ್ಷಕ ರವಿ ಹಾಗೂ ಗ್ರಾಮಾಂತರ ಪಿಎಸ್‍ಐ ಅವಿನಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಸುರೇಶ್ ಹಾಗೂ ಆತನ ಹೆಂಡತಿಯನ್ನ ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *