ಹುಲಿ ಘರ್ಜನೆ- ಕೆಲಸ ಬಿಟ್ಟು ಓಡೋಡಿ ಮನೆಗೆ ಬಂದ ಕಾರ್ಮಿಕರು

Public TV
1 Min Read

– ನಾಯಿ ಮರಿ ಹೊತ್ತೊಯ್ದ ಚಿರತೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಹುಲಿ ಭಯವಿದ್ದರೆ, ಬಯಲು ಸೀಮೆ ಭಾಗದಲ್ಲಿ ಚಿರತೆ ಆತಂಕ ಎದುರಾಗಿದೆ. ಹುಲಿ ಘರ್ಜನೆ ಕೇಳಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮನೆ ಕಡೆ ಓಡಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದಲ್ಲಿ ಹುಲಿ ಘರ್ಜನೆಯ ಶಬ್ದ ಕೇಳಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಭಯಗೊಂಡು ತೋಟದಿಂದ ಮನೆಗೆ ವಾಪಸ್ ಬಂದಿದ್ದಾರೆ. ಇಂದು ಮಧ್ಯಾಹ್ನ ತೋಟದ ಕೂಲಿಯಾಳುಗಳು ಎಂದಿನಂತೆ ಊಟ ಮುಗಿಸಿ ಕೆಲಸಕ್ಕೆ ಇಳಿಯುವಾಗ ಮೇಲಿಂದ ಮೇಲೆ ಜೋರಾಗಿ ಹುಲಿ ಘರ್ಜಿಸುವ ಶಬ್ದ ಕೇಳಿದೆ. ಶಬ್ದ ಆಲಿಸಿದಾಗ ಕೂಲಿ ಕಾರ್ಮಿಕರಿಗೆ ಮತ್ತೆ ಜೋರಾಗಿ ಹುಲಿ ಘರ್ಜನೆ ಕೇಳಿದೆ.

ಘರ್ಜನೆಯ ಶಬ್ದ ತೀರಾ ಸನಿಹ ಕೇಳಿಸಿದ್ದರಿಂದ ತಕ್ಷಣ ಕೂಲಿ ಕಾರ್ಮಿಕರು ಕೆಲಸ ಬಿಟ್ಟು ವಾಪಸ್ ಮನೆಗೆ ಬಂದಿದ್ದಾರೆ. ಏಳೆಂಟು ತಿಂಗಳಿಂದ ಭಾರತೀಬೈಲು ಗ್ರಾಮದಲ್ಲಿ ಹುಲಿ ಭಯ ಸ್ಥಳಿಯರಿಗೆ ಕಾಡುತ್ತಿದೆ. ಗ್ರಾಮದ ಅಂಚಿನಲ್ಲಿ ಹಾಗೂ ರಸ್ತೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಹಲವು ಬಾರಿ ಕಾಣಸಿಕ್ಕಿದೆ. ಇದರಿಂದ ಭಾರತೀಬೈಲು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಜಿಲ್ಲೆಯ ಬಯಲುಸೀಮೆ ಭಾಗ ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಚಿರತೆ ಭಯ ಸ್ಥಳಿಯರನ್ನ ಕಾಡುತ್ತಿದೆ. ಕಳೆದ ರಾತ್ರಿ ತೋಟದಲ್ಲಿರುವ ಗೊಬ್ಬರ ತಯಾರಿಕಾ ಘಟಕಕ್ಕೆ ಬಂದ ಚಿರತೆ, ನಾಯಿ ಮರಿಯೊಂದನ್ನು ಹೊತ್ತೊಯ್ದಿದೆ. ಚಿರತೆ ನಾಯಿ ಮರಿಯನ್ನ ಹೊತ್ತೊಯ್ಯೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಕಂಡ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಭಾರತೀಬೈಲು ಹಾಗೂ ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದ ಜನ ಅರಣ್ಯ ಇಲಾಖೆ ಬೋನಿಟ್ಟು ಹುಲಿ ಹಾಗೂ ಚಿರತೆಯನ್ನ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *