ಹುಬ್ಬಳ್ಳಿ ಜನತೆಯನ್ನ ಬೆಚ್ಚಿ ಬೀಳಿಸಿದ ಕೊಲೆ – ರುಂಡ ಮುಂಡ, ದೇಹದ ಎಲ್ಲಾ ಅಂಗಗಳು ದಿಕ್ಕಾಪಾಲು..!

Public TV
1 Min Read

ಹುಬ್ಬಳ್ಳಿ: ರುಂಡ ಹಾಗೂ ಮುಂಡ ಬೇರೆ, ಎರಡು ಕೈ, ಒಂದು ಕಾಲು ಪತ್ತೆ, ಇನ್ನೊಂದು ಕಾಲು ನಾಪತ್ತೆ. ಇಂತಹ ಪ್ರಕರಣವೊಂದು ವಾಣಿಜ್ಯ ನಗರಿಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿಯ ಸಂಸ್ಕಾರ ಶಾಲೆಯ ಸಮೀಪದಲ್ಲಿ ಅನಾಮಧೇಯ ದೇಹ ಸಿಕ್ಕ ಬೆನ್ನಲ್ಲೇ, ದೇಹ ಸಿಕ್ಕ ಕೆಲವು ಮೀಟರ್ ಅಂತರದಲ್ಲಿ ದೇಹದ ಎರಡು ಕೈ ಹಾಗೂ ಒಂದು ಕಾಲು ದೊರಕಿದ್ದು, ಇನ್ನೊಂದು ಕಾಲಿಗಾಗಿ ಮತ್ತೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಇಂತಹದೊಂದು ಅಪರಾಧ ಪ್ರಕರಣ ಇದೂವರೆಗೂ ನಡೆದಿರಲಿಲ್ಲ. ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿ ದೇಹದ ರುಂಡ ಸಿಕ್ಕ ನಂತರದ ಬೆಳವಣಿಗೆಯಲ್ಲಿ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇಹ ಮತ್ತು ಕೈ-ಕಾಲುಗಳು ದೊರೆತಿವೆ.

ದೇಹವನ್ನ ಸುಡುವ ಪ್ರಯತ್ನವೂ ನಡೆದಿದ್ದು, ಇನ್ನೊಂದು ಕಾಲು ಎಲ್ಲಿ ಹೋಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಮೃತದೇಹವನ್ನ ಇಷ್ಟೊಂದು ಕ್ರೂರವಾಗಿ ಕತ್ತರಿಸಿ, ಬೇರೆ ಬೇರೆ ಜಾಗದಲ್ಲಿ ಹಾಕಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

ಕಳೆದ 24 ಗಂಟೆಯಿಂದಲೂ ದೇಹದ ಭಾಗಗಳನ್ನ ಪೊಲೀಸರು ಹುಡುಕುತ್ತಿದ್ದಾರೆ. ಅದರ ಜೊತೆಗೆ ಕೊಲೆಯಾಗಿರುವ ವ್ಯಕ್ತಿ ಯಾರೂ ಎಂಬುದು ಪೊಲೀಸರಿಗೆ ತಲೆನೋವಾಗಿದೆ. ಇದನ್ನು ಪತ್ತೆ ಹಚ್ವಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಈ ಕುರಿತು ಮಹಾನಗರದ ಜನತೆಯಲ್ಲಿ ಮನವಿ ಮಾಡಿರುವ ಅವಳಿ ನಗರದ ಪೊಲೀಸ್ ಆಯಕ್ತರು, ಅನಾಮಧೇಯ ಶವ ಯಾರದು ಎಂದು ಪತ್ತೆ ಮಾಡಲು ಜನರು ಸಹಕರಿಸಬೇಕು. ಯಾರಾದರೂ ಮನೆಯಿಂದ 2-3 ದಿನಗಳ ಕಾಲ ನಾಪತ್ತೆಯಾಗಿದ್ರೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪ್ರಕರಣ ಬೇಧಿಸಲು ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *