ಹಿರೇನಾಗವಲ್ಲಿಯ ನಿವಾಸಿಯಿಂದ ಸುಧಾಕರ್ ವಿರುದ್ಧ ಆಕ್ರೋಶ

Public TV
1 Min Read

– ಸಚಿವರ ಬೆಂಬಲಿಗರಿಂದ ಹಲ್ಲೆಗೆ ಯತ್ನ
– ಕ್ವಾರಿ ಬಳಿ ಜಮೀನು ಹೊಂದಿದ್ದರಾ ಸುಧಾಕರ್?

ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿರುವ ಸಚಿವ ಸುಧಾಕರ್ ವಿರುದ್ಧ ಸ್ಥಳೀಯ ನಿವಾಸಿ ಆರೋಪಗಳ ಸುರಿಮಳೆಗೈದು ಆಕ್ರೋಶ ಹೊರ ಹಾಕಿದರು. ಇತ್ತ ಆರೋಪ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಸಚಿವರ ಬೆಂಬಲಿಗರು ಹಲ್ಲೆಗೆ ಯತ್ನಿಸಿದರು.

ಸಚಿವ ಸುಧಾಕರ್ ಮತ್ತು ಅವರ ಸಂಬಂಧಿಕರ ಒಡೆತನದ ಸರ್ವೇ ನಂಬರ್ 11ರಲ್ಲಿ 30 ಎಕರೆ ಜಮೀನು ಹೊಂದಿದ್ದು, ಅವರೇ ಗಣಿಗಾರಿಕೆಗೆ ಮುಂದಾಗಿದ್ದಾರೆ. ಹಾಗಾಗಿ ಈ ಸ್ಫೋಟಕ್ಕೆ ಸುಧಾಕರ್ ಅವರೇ ನೇರ ಹೊಣೆ. ಇಲ್ಲಿ ಹೇಳೋರು ಕೇಳೋರು ಯಾರಿಲ್ಲ ಎಂದು ಸಚಿವರ ವಿರುದ್ಧ ಆರೋಪಿಸಿದರು. ಸ್ಥಳದಲ್ಲಿದ್ದ ಸಚಿವರ ಬೆಂಬಲಿಗರು ನಿವಾಸಿ ಮೇಲೆ ಹಲ್ಲೆಗೆ ಮುಂದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಆರೋಪ ಮಾಡುತ್ತಿರುವ ವ್ಯಕ್ತಿ ವಿರೋಧ ಪಕ್ಷದವನು. ಉದ್ದೇಶಪೂರ್ವಕವಾಗಿ ಸ್ಥಳಕ್ಕೆ ಬಂದು ಗಲಾಟೆ ಮಾಡುತ್ತಿದ್ದಾನೆ ಎಂದು ಸಚಿವರು ಬೆಂಬಲಿಗರು ಸ್ಪಷ್ಟನೆ ನೀಡಿದ್ದಾರೆ.

ರಾತ್ರಿ ಸುಮಾರು 12ರ ನಂತರ ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟದಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದರು. ಸ್ಥಳದಲ್ಲಿಯೇ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಓರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಜಿಲೆಟಿನ್ ಹೊತ್ತು ತಂದ ಟಾಟಾ ಏಸ್ ಚಾಲಕ ರಿಯಾಜ್ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *