ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಎನ್‌ಕೌಂಟರ್‌ಗೆ ಬಲಿ

Public TV
1 Min Read

– ಭಾರತೀಯ ಸೇನೆಗೆ ಬಹುದೊಡ್ಡ ಗೆಲುವು

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥನನ್ನು ಶ್ರೀನಗರದಲ್ಲಿ ಎನ್‍ಕೌಂಟರ್ ಮಾಡಲಾಗಿದೆ.

ಈ ವಿಚಾರದ ಬಗ್ಗೆ ಇಂದು ಮಾಹಿತಿ ನೀಡಿರುವ ಜಮ್ಮು ಕಾಶ್ಮೀರದ ಪೊಲೀಸರು, ಈ ಎನ್‍ಕೌಂಟರ್ ನಿಂದ ಉಗ್ರರ ವಿರುದ್ಧ ಬಹುದೊಡ್ಡ ಗೆಲುವು ಸಾಧಿಸಿದಂತೆ ಆಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನಾಗಿದ್ದ ಉಗ್ರ ರಯಾಜ್ ನಾಯ್ಕುನನ್ನು ಮೇ ತಿಂಗಳಲ್ಲಿ ಭಾರತೀಯ ಸೇನೆ ಹೊಡೆದು ಹಾಕಿತ್ತು. ಇದಾದ ನಂತರ ಸೈಫುಲ್ಲಾ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ.

ಇಂದು ಶ್ರೀನಗರದ ರಂಗ್ರೆತ್‍ನಲ್ಲಿ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆ ಆ ಪ್ರದೇಶವನ್ನು ಸುತ್ತುವರೆದಿತ್ತು. ಈ ವೇಳೆ ಉಗ್ರರು ಸೇನೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದಕ್ಕೆ ಪ್ರತಿಯಗಿ ಸೇನೆ ಕೂಡ ಗುಂಡಿನ ದಾಳಿ ಮಾಡಿದ್ದು, ಉಗ್ರ ಸೈಫುಲ್ಲಾನನ್ನು ಹೊಡೆದು ಹಾಕಿದ್ದಾರೆ. ಈ ಕಾರ್ಯಚರಣೆ ಸಂದರ್ಭದಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇಂದು ಕೊಲ್ಲಲ್ಪಟ್ಟ ಸೈಫುಲ್ಲಾ ಜಮ್ಮು ಕಾಶ್ಮೀರದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ. ಜೊತೆಗೆ ಇಂದಿನ ಕಾರ್ಯಚರಣೆ ವೇಳೆಯೂ ಮೊದಲು ಆತನೇ ಸೇನೆಯ ಮೇಲೆ ಗುಂಡಿನ ದಾಳಿ ಮಾಡಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಿಂದ ಒಂದು ಎಕೆ-47 ಮತ್ತು ಪಿಸ್ತೂಲ್ ಅನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *