ಹಾಲು, ನೀರು ಅರ್ಪಿಸಿ ಕಂದ ಕೃಷ್ಣನಿಗೆ ಸ್ವಾಗತ ಕೋರಿದ ಉಡುಪಿಯ ಅದಮಾರು ಶ್ರೀ

Public TV
1 Min Read

– ಕೃಷ್ಣನರಲ್ಲಿ ಅರ್ಘ್ಯ ನೀಡಿ ಪುಳಕಗೊಂಡ ಮುರಾರಿ ಭಕ್ತರು

ಉಡುಪಿ: ಭಗವಾನ್ ಶ್ರೀಕೃಷ್ಣನ ಜನ್ಮವಾಗಿದೆ. ದೇವರರ ಹುಟ್ಟಿಗಾಗಿ ಉಪವಾಸವಿದ್ದು ಕಾಯುತ್ತಿದ್ದ ಭಗವದ್ಭಕ್ತರು ಮುದ್ದುಕೃಷ್ಣನಿಗೆ ಅರ್ಘ್ಯ ಕೊಟ್ಟು ಭೂಮಿಗೆ ಬರಮಾಡಿಕೊಂಡಿದ್ದಾರೆ.

ಅಘ್ರ್ಯ ಅಂದ್ರೆ ಹಾಲು ಮತ್ತು ನೀರನ್ನು ಅರ್ಪಿಸಿ ಶ್ರೀಕೃಷ್ಣ ದೇವರನ್ನು ಭೂಮಿಗೆ ಬರಮಾಡಿಕೊಳ್ಳುವುದು ಎಂದು ಅರ್ಥ. ಕೃಷ್ಣನೂರು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ ನಡೆಯುತ್ತಿದೆ. ಸಾಂಕ್ರಾಮಿಕ ಕೊರೊನಾ ಇದ್ದರೂ ಸಂಪ್ರದಾಯ ಸಹಜವಾಗಿ ನಡೆಯುತ್ತಿದೆ.

ಕೃಷ್ಣ ಜನ್ಮಾಷ್ಟಮಿಯ ಬಹುಮುಖ್ಯ ಧಾರ್ಮಿಕ ವಿಧಿ ಕೃಷ್ಣನಿಗೆ ಅಘ್ರ್ಯ ಪ್ರಧಾನ. ಶ್ರೀ ಕೃಷ್ಣನ ಜನ್ಮಾಷ್ಟಮಿಯ ದಿನವಿಡೀ ಅಷ್ಟ ಮಠಾಧೀಶರು, ಭಕ್ತರು ಉಪವಾಸದಲ್ಲಿದ್ದರು. ಪರ್ಯಾಯ ಅದಮಾರ ಶ್ರೀಗಳು ರಾತ್ರಿ 12.16ಕ್ಕೆ ಶ್ರೀಕೃಷ್ಣ ದೇವರಿಗೆ ಅಘ್ರ್ಯ ಸಲ್ಲಿಸಿದರು.

ಕೃಷ್ಣನ ಗರ್ಭ ಗುಡಿಯ ಪಕ್ಕದಲ್ಲಿ ತುಳಸಿಗೆ ಶಂಖದ ಮೂಲಕ ನೀರು ಹಾಗೂ ಹಾಲು ಸಮರ್ಪಿಸುವ ಮೂಲಕ ಚಂದ್ರನಿಗೆ ಅರ್ಘ್ಯ ಸಮರ್ಪಿಸಿದರು. ಚಂದ್ರನಿಗೆ ಅಘ್ರ್ಯ ಸಮರ್ಪಿಸಿದ ಬಳಿಕ ಕೃಷ್ಣನ ಮೂರ್ತಿಗೆ ಹಾಲು, ನೀರಿನ ಮೂಲಕ ಅರ್ಘ್ಯ ಸಮರ್ಪಿಸಿ, ಉಂಡೆ ಚಕ್ಕುಲಿ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಮಾಡುವ ಮೂಲಕ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಯ್ತು.

ಕೊರೊನಾ ಇರುವುದರಿಂದ ಕೃಷ್ಣ ಮಠದ ಒಳಗೆ ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ದಿನವಿಡೀ ಉಪವಾಸದಲ್ಲಿದ್ದ ಭಕ್ತ ಸಮೂಹ ತಮ್ಮ ತಮ್ಮ ಮನೆಗಳಲ್ಲಿ ಅರ್ಘ್ಯ ಪ್ರಧಾನ ಮಾಡಿ ಪುನೀತರಾದರು. ಈ ಮೂಲಕ ಉಪವಾಸವನ್ನು ತೊರೆದರು. ಉಡುಪಿಯಲ್ಲಿ ಸೌರಮಾನ ಪಂಚಾಂಗವನ್ನು ಅನುಸರಿಸುವುದರಿಂದ ಈಗ ಅಷ್ಟಮಿ ಆಚರಿಸಲಾಗುತ್ತಿದೆ. ಕೃಷ್ಣಪಕ್ಷ ಚಂದ್ರೋದಯದ ಕಾಲ, ರೋಹಿಣಿ ನಕ್ಷತ್ರ ಬಾನಲ್ಲಿ ಬೆಳಗುವ ಸಂದರ್ಭದಲ್ಲಿ ಶ್ರೀಕೃಷ್ಣ ದೇವರು ಹುಟ್ಟಿದರು ಎಂಬ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಉಡುಪಿಯಲ್ಲಿ ಈ ಹೊತ್ತಿನಲ್ಲಿ ಆಚರಿಸಲಾಗುತ್ತದೆ.

ಮುಂಜಾನೆ ಶ್ರೀಕೃಷ್ಣನಿಗೆ ಅಭಿಷೇಕಗಳು, ವಿಶೇಷ ಅಲಂಕಾರ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 3:00 ಗಂಟೆಯಿಂದ 6 ಗಂಟೆ ತನಕ ರಥಬೀದಿಯಲ್ಲಿ, ಕೃಷ್ಣ ಮಠದ ಒಳಗೆ ಮತ್ತು ಮಧ್ವಸರೋವರದಲ್ಲಿ ಶ್ರೀಕೃಷ್ಣನಲ್ಲಿ ಉತ್ಸವದ ಕಾರ್ಯಕ್ರಮಗಳು ನಡೆಯಲಿದೆ. ಸಾರ್ವಜನಿಕರಿಗೆ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *