ಹಾಡಹಗಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯನ್ನು ಬರ್ಬರವಾಗಿ ಕೊಂದ್ರು!

Public TV
1 Min Read

ಜೈಪುರ: ಹಾಡಹಗಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ರಾಜಸ್ಥಾನದ ಭರತ್ ಪುರ್ ನಲ್ಲಿ ನಡೆದಿದೆ.

ಹೌದು. ಈ ಘಟನೆ ಶುಕ್ರವಾರ ಸಂಜೆ 4.45ರ ಸುಮಾರಿಗೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ವೈದ್ಯ ದಂಪತಿ ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ನಡುರಸ್ತೆಯಲ್ಲಿಯೇ ಈ ಕೃತ್ಯ ಎಸಗಲಾಗಿದೆ.

ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ನಡುರಸ್ತೆಯಲ್ಲಿಯೇ ಕಾರನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿದ್ದಾರೆ. ಅಲ್ಲದೆ ಕಿರಾತಕರು ವೈದ್ಯರಿದ್ದ ಕಾರಿನತ್ತ ತೆರಳಿದ್ದಾರೆ. ಇತ್ತ ತಮ್ಮ ಕಡೆ ಬರುತ್ತಿರುವುದನ್ನು ಗಮನಿಸಿದ ದಂಪತಿ ಕಾರಿನ ಕಿಟಿಕಿ ಗ್ಲಾಸ್ ಕೆಳಗೆ ಮಾಡಿ ನೋಡುತ್ತಿದ್ದಂತೆಯೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ದಂಪತಿ ಸಾವನ್ನಪ್ಪಿರುವುದು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ದುಷ್ಕರ್ಮಿಗಳು ಮತ್ತೆ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾರೆ. ಈ ಬೆಚ್ಚಿ ಬೀಳಿಸಿರುವ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೇಲ್ನೋಟಕ್ಕೆ ಇದೊಂದು ಸೇಡು ತೀರಿಸಿಕೊಳ್ಳುವ ಸಲುವಾಗಿ ನಡೆದ ಕೊಲೆಯೆಂದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಯಾಕೆಂದರೆ ಎರಡು ವರ್ಷಗಳ ಹಿಂದೆ ಯುವತಿಯೊಬ್ಬಳ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ದಂಪತಿ ಭಾಗಿಯಾಗಿರುವ ಆರೋಪವಿದೆ. ಅಲ್ಲದೆ ಆ ಯುವತಿ ವೈದ್ಯರೊಂದಿಗೆ ಸಂಬಂಧದಲ್ಲಿದ್ದಳು ಎಂಬುದಾಗಿ ತಿಳಿದುಬಂದಿದೆ.

ಸದ್ಯ ದಂಪತಿಯನ್ನು ಕೊಲೆ ಮಾಡಿರುವ ವ್ಯಕ್ತಿಯನ್ನು ಯುವತಿ ಸಹೋದರ ಎಂದು ಗುರುತಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *