ಹರಿದ್ವಾರದ ಕುಂಭಮೇಳ ಸಾಂಕೇತಿಕವಾಗಿರಲಿ: ಮೋದಿ

Public TV
2 Min Read

ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ಕೊರೊನಾ ಸ್ಫೋಟವೇ ಸಂಭವಿಸಿದೆ. ಈ ಸಂದರ್ಭದಲ್ಲಿ ಹಿಂದೂಗಳ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ಹರಿದ್ವಾರದಲ್ಲಿ ನಡೆಯುವ ಕುಂಭಮೇಳದಲ್ಲಿ ಲಕ್ಷಗಟ್ಟಲೆ ಜನ ಸೇರುತ್ತಿರುವ ವಿಚಾರವಾಗಿ ಪ್ರಧಾನ ಮಂತ್ರಿ ಮೋದಿಯವರು ಟ್ವೀಟ್ ಮಾಡಿ ಜಾಗೃತಿಯನ್ನು ಮೂಡಿಸಿದ್ದಾರೆ.

 

ಕೊರೊನ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಕುಂಭಮೇಳವನ್ನು ಸಾಂಕೇತಿಕವಾಗಿ ಮಾತ್ರ ಆಚರಿಸಬೇಕು. ಕೊರೊನಾ ವಿರುದ್ಧ ಹೋರಾಟಕ್ಕೆ ಕುಂಭಮೇಳ ಉತ್ತೇಜನ ನೀಡಬೇಕು. ಹಿರಿಯ ಸಂತ ಹಾಗೂ ಹಿಂದೂ ಧರ್ಮ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿಜಿ ಮಹಾರಾಜ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಸ್ಥಳೀಯ ಆಡಳಿತ ಜೊತೆ ಸಹಕರಿಸಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಿ ಎಂದು ನಾನು ಹೇಳಿದ್ದಕ್ಕೆ ಸ್ಪಂದಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಾವು ಪ್ರಧಾನಿ ನರೇಂದ್ರ ಮೋದಿಯವರ ಮನವಿಯನ್ನು ಗೌರವಿಸುತ್ತೇವೆ. ಹರಿದ್ವಾರದ ಕುಂಭಮೇಳದಲ್ಲಿ ಸ್ನಾನ ಮಾಡಲು ಗುಂಪುಗುಂಪಾಗಿ ಬರಬೇಡಿ ಎಂದು ನಾನು ಭಕ್ತರಲ್ಲಿ, ಸಾಧುಗಳಲ್ಲಿ ಮನವಿ ಮಾಡುತ್ತೇನೆ. ಕೊರೊನಾದ ಎಲ್ಲಾ ನಿಯಮಗಳನ್ನು ಪಾಲಿಸಿ ಎಂದು ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ ಟ್ವೀಟ್ ಮಾಡಿದ್ದಾರೆ.

ಸಾಮಾನ್ಯ ಸಮಯಗಳಲ್ಲಾದರೆ ಪ್ರತಿ 12 ವರ್ಷಗಳಿಗೊಮ್ಮೆ ಬರುವ ಕುಂಭಮೇಳ ಜನವರಿ ಮಧ್ಯಭಾಗದಿಂದ ಆಚರಿಸಲು ಆರಂಭಿಸಿ ಏಪ್ರಿಲ್‍ವರೆಗೆ ಮುಂದುವರಿಯುತ್ತಿತ್ತು. ಆದರೆ ಈ ಬಾರಿ ಕುಂಭಮೇಳವನ್ನು ಕೆಲವು ದಿನಗಳ ಮಟ್ಟಿಗೆ ಸೀಮಿತಗೊಳಿಸಲಾಗಿದೆ. ಕೊರೊನ ಎಲ್ಲೆಡೆ ಹೆಚ್ಚುತ್ತಿರುವ ಕಾರಣದಿಂದ ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *