ಹಣವಿದ್ದಾಗ ಪತ್ನಿ ಬಿಟ್ಟೋದ ಪತಿ – ಅನಾರೋಗ್ಯ ಬಂದಾಗ ಪತ್ನಿ ಬೇಕೆಂದು ವ್ಯಕ್ತಿ ಗೋಳಾಟ

Public TV
2 Min Read

ಮಂಡ್ಯ: ಹಲವು ವರ್ಷಗಳ ಹಿಂದೆ ವ್ಯಕ್ತಿಯೋರ್ವ ಪತ್ನಿ ಮಕ್ಕಳು ಬೇಡ ಎಂದು ಊರು ಬಿಟ್ಟು ಹೋಗಿದ್ದನು. ಆದರೆ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಇದೀಗ ಹೆಂಡತಿ ಬೇಕೆಂದು ಗೋಳಾಡುತ್ತಾ, ವ್ಯಕ್ತಿ ಮನೆಗೆ ಹಿಂದಿರುಗಿದ್ದಾನೆ.

ಮದ್ದೂರು ತಾಲೂಕಿನ ಶಿವಣ್ಣ ಎಂಬಾತ ಚೆನ್ನಾಗಿದ್ದಾಗ ಮೈತುಂಬ ಸಾಲ ಮಾಡಿ ಮನೆ, ಜಮೀನು ಮಾರಾಟ ಮಾಡಿದ್ದನು. ಅಲ್ಲದೆ ಹೆಂಡತಿ, ಮಕ್ಕಳು ಬೇಡವೆಂದು ಊರು ಬಿಟ್ಟು ಬೆಂಗಳೂರಿಗೆ ತೆರಳಿದ್ದನು. ಕೆಲವು ವರ್ಷಗಳ ಬಳಿಕ ಅನಾರೋಗ್ಯದಿಂದ ಹಾಸಿಗೆ ಹಿಡಿದ ಶಿವಣ್ಣ, ಇದೀಗ ಊರಿಗೆ ವಾಪಸ್ಸಾಗಿದ್ದಾನೆ. ಆದರೆ ಹೆಂಡತಿ ಹಾಗೂ ಮಕ್ಕಳು ಆತನನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ನೆಮ್ಮದಿಯಾಗಿ ಸಾಯುವುದಕ್ಕೆ ಜಾಗ ಕೊಡಿ ಎಂದು ಅಂಗಲಾಚಿದ್ದಾನೆ.

ಶಿವಣ್ಣ ಪ್ರಭಾವತಿ ಎಂಬಾಕೆಯನ್ನು ಮದುವೆಯಾಗಿದ್ದು, ಈತನಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳಿದ್ದಾರೆ. 15 ವರ್ಷಗಳ ಹಿಂದೆ ಮೈತುಂಬ ಸಾಲ ಮಾಡಿಕೊಂಡಿದ್ದ ಶಿವಣ್ಣ ತನಿಗಿದ್ದ ಎರಡು ಮನೆ, ಐದು ಎಕರೆ ಜಮೀನನ್ನು ಮಾರಾಟ ಮಾಡಿದ್ದನು. ಬಳಿಕವಾದರೂ ಜವಾಬ್ದಾರಿ ಹೊತ್ತು ಹೆಂಡತಿ, ಮಕ್ಕಳ ನೋಡಿಕೊಳ್ಳದೇ, ಎಲ್ಲರನ್ನು ಬಿಟ್ಟು ಬೆಂಗಳೂರು ತೆರಳಿದ್ದನು.

ಒಂದೂವರೆ ವರ್ಷದ ಹಿಂದೆ ಪಾಶ್ರ್ವವಾಯು (ಲಕ್ವ) ರೋಗಕ್ಕೆ ತುತ್ತಾಗಿ, ದೇಹದ ಎಡಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾನೆ. ಸ್ನೇಹಿತರ ನೆರವಿನಿಂದ ಇಷ್ಟುದಿನ ಆಶ್ರಮವೊಂದರಲ್ಲಿದ್ದ ಶಿವಣ್ಣ ಇದ್ದನು. ಆದರೆ ಅಲ್ಲಿ ಪ್ರತಿ ತಿಂಗಳು 10 ಸಾವಿರ ಹಣ ಕಟ್ಟಬೇಕಿತ್ತು. ಹಣ ಕಟ್ಟಲು ಸಾಧ್ಯವಾಗದಿದ್ದಾಗ ಊರಿಗೆ ವಾಪಸ್ ಬಂದು ಮಕ್ಕಳ ಬಳಿ ಆಶ್ರಯ ಬೇಡುತ್ತಿದ್ದಾನೆ.

ಈತನನ್ನು ಮನೆಗೆ ಸೇರಿಸಿಕೊಳ್ಳಲು ಹೆಂಡತಿ, ಮಕ್ಕಳು ಇದಿಗ ನಿರಾಕರಿಸಿದ್ದಾರೆ. ನಾವು ಕಷ್ಟದಲ್ಲಿದ್ದಾಗ ಅಂಗಲಾಚಿದರೂ ತಿರುಗಿಯೂ ನೋಡಲಿಲ್ಲ. ಹಾಸಿಗೆ ಹಿಡಿದ ಮೇಲೆ ಈತನಿಗೆ ನಮ್ಮ ನೆನಪಾಗಿದೆ. ಯಾವುದೇ ಕಾರಣಕ್ಕೂ ನಾವು ಈತನಿಗೆ ಆಶ್ರಯ ನೀಡುವುದಿಲ್ಲ ಎಂದು ಪತ್ನಿ ಹಾಗೂ ಮಕ್ಕಳು ಹೇಳುತ್ತಿದ್ದಾರೆ.

ಇದೀಗ ಪಕ್ಕದ ಮನೆಯ ಜಗುಲಿಯಲ್ಲಿ ಮಲುಗಿರುವ ಶಿವಣ್ಣನಿಗೆ ನೆರೆಹೊರೆಯವರು ಊಟ ನೀಡಿ ಆರೈಕೆ ಮಾಡುತ್ತಿದ್ದಾರೆ. ಆದರೆ ನಿರಂತರವಾಗಿ ನೋಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ನ್ಯಾಯ ಪಂಚಾಯಿತಿ ಮಾಡಿ ಮಕ್ಕಳನ್ನು ಒಪ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಚೆನ್ನಾಗಿದ್ದಾಗ ದುಡಿದು ಹೆಂಡತಿ ಮಕ್ಕಳನ್ನು ನೋಡಿಕೊಂಡಿದ್ದರೆ ಈತನಿಗೆ ಜೀವನದ ಕಡೇ ದಿನಗಳನ್ನು ಕಳೆಯಲು ಆಶ್ರಯ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಮನುಷ್ಯತ್ವದ ದೃಷ್ಟಿಯಿಂದಲಾದರೂ ಮಕ್ಕಳು ಆಶ್ರಯ ನೀಡುತ್ತಾರಾ ಎನ್ನುವುದನ್ನು ಕಾದುನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *