ಸ್ವಗ್ರಾಮದಲ್ಲಿ ಇಂದು ಮಾಜಿ ಸ್ಪೀಕರ್ ಕೃಷ್ಣ ಅಂತ್ಯಸಂಸ್ಕಾರ

Public TV
1 Min Read

ಮಂಡ್ಯ: ಲಿವರ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ದ ಮಾಜಿ ಸ್ಪೀಕರ್ ಕೆ.ಆರ್‍.ಪೇಟೆ ಕೃಷ್ಣ ಅವರು ನಿನ್ನೆ ನಿಧನರಾದ ಹಿನ್ನೆಲೆ ಇಂದು ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರಾದ ಕೊತ್ತಮಾರನಹಳ್ಳಿಯಲ್ಲಿ ಜರುಗಿತು.

ಮಂಡ್ಯ ಜಿಲ್ಲೆಯ ಕೆ.ಆರ್‍.ಪೇಟೆ ತಾಲೂಕಿನ ಕೊತ್ತಮಾರನಹಳ್ಳಿಯಲ್ಲಿ ಇಂದು ಬೆಳಗ್ಗೆ ಒಕ್ಕಲಿಗರ ಸಂಪ್ರದಾಯದಂತೆ ಕೃಷ್ಣ ಅವರ ಅಂತ್ಯಸಂಸ್ಕಾರ ಜರುಗಿತು. ಹಲವು ದಿನಗಳಿಂದ ಲಿವರ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ದ ಕೃಷ್ಣ ಅವರು ನಿನ್ನೆ ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ನಿಧರಾಗಿದ್ದರು.

ಇಂದು ಬೆಳಗ್ಗಿನ ಜಾವ ಅವರ ಪಾರ್ಥಿವ ಶರೀರವನ್ನು ಕೆ.ಆರ್‍.ಪೇಟೆ ಮಾರ್ಗವಾಗಿ ತರಲಾಗಿತ್ತು. ಸರಳ ಸಜ್ಜನತೆಗೆ ಹೆಸರಾಗಿದ್ದ ಕೃಷ್ಣ ಅವರನ್ನು ಮಂಡ್ಯದ ಗಾಂಧಿ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಅವರ ಪಾರ್ಥಿವ ಶರೀರವನ್ನು ನೋಡಲು ಕೆ.ಆರ್‍.ಪೇಟೆ ರಸ್ತೆಯ ಎರಡು ಬದಿಯಲ್ಲಿ ಸಾವಿರಾರು ಅಭಿಮಾನಿಗಳು ನಿಂತು ಅಂತಿಮ ದರ್ಶನ ಪಡೆದರು. ನಂತರ ಸಂತೇಬಾಚಹಳ್ಳಿಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋದಾಗ ಇಲ್ಲು ಸಹ ನೂರಾರು ಮಂದಿ ಕೃಷ್ಣ ಅವರ ಅಂತಿಮ ದರ್ಶನ ಪಡೆದರು.

ಕೃಷ್ಣ ಅವರು ಮಂಡ್ಯ ಜಿಲ್ಲೆಯ ಕೆ.ಆರ್‍.ಪೇಟೆ ತಾಲೂಕಿನ ಕೊತ್ತಮಾರನಹಳ್ಳಿ ಗ್ರಾಮದವರು. ಇವರು ಮೂರು ಬಾರಿ ಕೆ.ಆರ್‍.ಪೇಟೆ ಕ್ಷೇತ್ರದಿಂದ ಶಾಸಕರಾಗಿದ್ದು, 1996 ರಲ್ಲಿ ಮಂಡ್ಯದ ಸಂಸದರು ಸಹ ಆಗಿದ್ದರು. 1988 ರಲ್ಲಿ ಬೊಮ್ಮಾಯಿ ಅವರ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿ ಹಾಗೂ 2006 ರಿಂದ 2008ರ ವರೆಗೆ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *