ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಸಚಿವರಿಗೆ ಸಿದ್ದಗಂಗಾ ಶ್ರೀ ಸಲಹೆ

Public TV
1 Min Read

ತುಮಕೂರು: ರೈತರಿಗೆ, ಕಾರ್ಮಿಕರಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಹಾಗೆಯೇ ಖಾಸಗಿ ಶಾಲೆಯ ಸಿಬ್ಬಂದಿಗೂ ಪರಿಹಾರ ಕೊಡಬೇಕು ಎಂದು ಶಿಕ್ಷಣ ಸಚಿವರಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕೇಳಿಕೊಂಡಿದ್ದಾರೆ.

ನಗರದಲ್ಲಿ ಮಾತನಾಡುತ್ತಾ ಖಾಸಗಿ ಸಂಸ್ಥೆಗಳ ಮೇಲೆ ಹೇರಿರುವ ನಿಯಮ ಸಡಿಲಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ರಾಜ್ಯ ಸರ್ಕಾರದ ಜೊತೆಯಲ್ಲಿ ಕೆಲಸ ಮಾಡುತ್ತಿವೆ. ನಾಡಿನ ಶೈಕ್ಷಣಿಕ ಪ್ರಗತಿಗೆ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದರು.

ಕೊರೊನಾ ಬಂದ ಬಳಿಕ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿವೆ. ಶಿಕ್ಷಣ ಕ್ಷೇತ್ರ ಕೂಡ ಸ್ಥಗಿತಗೊಂಡಿದೆ. ಖಾಸಗಿ ಸಂಸ್ಥೆಗಳ ಸಿಬ್ಬಂದಿಗೆ ವೇತನ ಕೊಡುವುದು ಕಷ್ಟವಾಗಿದೆ. ರೈತರಿಗೆ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ಖಾಸಗಿ ಶಾಲೆಯ ಸಿಬ್ಬಂದಿಗೂ ಪರಿಹಾರ ಕೊಡಬೇಕು. ಸರ್ಕಾರ ಈ ಬಗ್ಗೆ ಗಮನಹರಿಸುತ್ತೆ ಅನಿಸುತ್ತೆ ಅಂತ ಭಾವಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಸಂಸ್ಥೆಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಲಾಗಿದೆ. ಈ ನಿಯಮ ಅಳವಡಿಕೆ ಕಷ್ಟಸಾಧ್ಯವಾಗಿದೆ. ಎಲ್ಲೋ ಒಂದು ಕಡೆ ನಡೆದ ಸಣ್ಣಪುಟ್ಟ ಘಟನೆಗಳನ್ನು ಎಲ್ಲಾ ಕಡೆ ಅನ್ವಯಿಸುವುದು ಸರಿಯಲ್ಲ. ಈ ನಿಯಮವನ್ನು ಸಡಿಲಗೊಳಿಸಬೇಕು. ಖಾಸಗಿ ಸಂಸ್ಥೆಗಳು ಸಾಲ ಮಾಡಿಕೊಂಡಿವೆ. ಬ್ಯಾಂಕ್ ಸಾಲ ಕಟ್ಟಲು ಕಾಲಾವಕಾಶ ನೀಡಬೇಕು. ಖಾಸಗಿ ಸಂಸ್ಥೆಗಳು ಹಲವು ಬೇಡಿಕೆನ್ನಿಟ್ಟುಕೊಂಡು ಹೋರಾಟ ಮಾಡುತ್ತಿವೆ ಎಂದು ಹೇಳಿದರು.

ನಿಯಮಗಳನ್ನು ಸಡಿಲಗೊಳಿಸಿ ಮಾನ್ಯತೆ ನವೀಕರಣ ಮಾಡಬೇಕು. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಶಿಕ್ಷಣ ಸಚಿವರು ಈ ವಿಚಾರದ ಬಗ್ಗೆ ಗಮನ ಹರಿಸಬೇಕು. ಒಟ್ಟಿನಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ವಾಮೀಜಿಗಳು ಸುರೇಶ್ ಕುಮಾರ್ ಅವರಿಗೆ ಸಲಹೆ ನಿಡಿದರು.

Share This Article
Leave a Comment

Leave a Reply

Your email address will not be published. Required fields are marked *