ಸೋಮನಾಥ ಮಂದಿರದ ಕೆಳಗೆ 3 ಅಂತಸ್ತಿನ ಕಟ್ಟಡ, ಬೌದ್ಧ ಗುಹೆ ಪತ್ತೆ

Public TV
2 Min Read

– 12 ಮೀಟರ್ ಕೆಳಗಿನವರೆಗೆ ಅಧ್ಯಯನ

ಗಾಂಧಿನಗರ: ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಅಡಿಯಲ್ಲಿ ಮೂರು ಮಹಡಿಯ ಕಟ್ಟಡ ಇರೋದು ಪತ್ತೆಯಾಗಿದೆ. ಐಐಟಿ ಗಾಂಧಿನಗರ ಮತ್ತು ನಾಲ್ಕು ಸಂಸ್ಥೆಗಳ ಪುರಾತತ್ವ ತಜ್ಞರು ದೇಗುಲದ ಕೆಳಗಿನ ಕಟ್ಟಡವನ್ನ ಪತ್ತೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಮತ್ತು ದೇವಾಲಯದ ಟ್ರಸ್ಟಿ ಆಗಿರುವ ನರೇಂದ್ರ ಮೋದಿ ಅವರ ಆದೇಶದ ಮೇಲೆ ಈ ಉತ್ಖನನ ನಡೆಸಲಾಗಿತ್ತು. ಒಂದು ವರ್ಷದ ಹಿಂದೆ ದೆಹಲಿಯ ಸಭೆಯಲ್ಲಿ ಪುರಾತತ್ವ ಇಲಾಖೆಗೆ ಉತ್ಖನನ ನಡೆಸುವಂತೆ ಪ್ರಧಾನಿಗಳು ಆದೇಶಿಸಿದ್ದರು.

‘ಎಲ್’ ಆಕಾರದಲ್ಲಿರುವ ಕಟ್ಟಡ: ಕಳೆದ ಒಂದು ವರ್ಷದಿಂದ ಅಧ್ಯಯನ ನಡೆಸಿರುವ ಪುರಾತತ್ವ ಇಲಾಖೆ 32 ಪುಟಗಳ ವರದಿಯನ್ನ ಸಿದ್ಧಪಡಿಸಿ ಸೋಮನಾಥ್ ಟ್ರಸ್ಟ್ ಗೆ ನೀಡಿದೆ. ಮಂದಿರದ ಕೆಳಗೆ ‘ಎಲ್’ ಆಕಾರದಲ್ಲಿ ಮತ್ತೊಂದು ಕಟ್ಟಡವಿದೆ. ಸೋಮನಾಥ ದೇವಾಲಯದ ದಿಗ್ವಿಜಯ್ ದ್ವಾರ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆಯ ಆಸುಪಾಸಿನಲ್ಲಿ ಬೌಧ್ಧ ಗುಹೆಗಳಿವೆ ಎಂದು ಉತ್ಖನನ ತಂಡ ಹೇಳಿದೆ.

ತಜ್ಷರ ತಂಡ ಸುಮಾರು 5 ಕೋಟಿ ಮೌಲ್ಯದ ಮಶೀನ್ ಬಳಸಿ ಶೋಧನೆ ನಡೆಸಿದೆ. ಭೂಮಿಯ ಕೆಳಗೆ ಅಂದ್ರೆ 12 ಮೀಟರ್ ವರೆಗೆ ಜಿಪಿಆರ್ ಸಹಾಯದಿಂದ ಶೋಧ ನಡೆಸಿದೆ. ದೇವಾಲಯದ ಕೆಳಗೆ ಕಟ್ಟಡವಿದ್ದು, ಅದು ಪ್ರವೇಶ ದ್ವಾರವನ್ನ ಹೊಂದಿದೆ ಎಂದು ತಜ್ಞರ ತಂಡ ಹೇಳಿದೆ.

ರಾಜರಿಂದ 5 ಬಾರಿ ಜೀರ್ಣೋದ್ಧಾರ: ಮೊದಲಿಗೆ ಇಲ್ಲಿ ಸಣ್ಣ ಮಂದಿರ ಇತ್ತು. ಏಳನೇ ಶತಮಾನದಲ್ಲಿ ವಲ್ಲಭಿಯ ಮೈತ್ರಕ ರಾಜರು ಈ ದೇವಾಲಯವನ್ನ ಜೀರ್ಣೋದ್ಧಾರ ಮಾಡಿದ್ದರು. ತದನಂತರ ಎಂಟನೇ ಶತಮಾನದಲ್ಲಿ ಅರೇಬಿಕ್ ಗವರ್ನರ್ ಜುನೇದ್ ದೇಗುಲವನ್ನ ಧ್ವಂಸಗೊಳಿಸಲು ತನ್ನ ಸೈನ್ಯವನ್ನ ಕಳುಹಿಸಿದ್ದನು. ಕ್ರಿಸ್ತ ಶಕ 815ರಲ್ಲಿ ಪ್ರತಿಹಾರದ ರಾಜ ನಾಗಭಟ್ಟ ಮೂರನೇ ಬಾರಿ ಈ ದೇವಾಲಯವನ್ನು ನಿರ್ಮಿಸಿದರು. ಇದೇ ಅವಶೇಷಗಳ ಮೇಲೆ ಮಾಲ್ವಾ ರಾಜಾ ಬೋಜ ಮತ್ತು ಗುಜರಾತಿನ ಅರಸ ಭೀಮದೇವ ಮಂದಿರವನ್ನ ಪುನರ್ ನಿರ್ಮಾಣ ಮಾಡಿದ್ದರು. 1169ರಲ್ಲಿ ರಾಜಾ ಕುಮಾರ್ ಪಾಲ್ ದೇಗುಲವನ್ನ ಪುನಶ್ಚೇತನಗೊಳಿಸಿದನು.

ಸದ್ಯದ ದೇವಾಲಯದಲ್ಲಿ ಪಟೇಲರ ಪಾತ್ರ: 1706ರಲ್ಲಿ ಮೊಗಲ್ ಬಾದ್‍ಶಾ ಔರಂಗಜೇಬ್ ಸೋಮನಾಥ ದೇವಾಲಯವನ್ನ ಸಂಪೂರ್ಣವಾಗಿ ಕೆಡವಿದ್ದನು. ಸ್ವತಂತ್ರ ಬಳಿಕ 1947ರಲ್ಲಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ದೇವಸ್ಥಾನದ ನಿರ್ಮಾಣಕ್ಕೆ ಆದೇಶ ನೀಡಿದ್ದರು. 1951ರಲ್ಲಿ ಹೊಸ ಸೋಮನಾಥ ದೇಗುಲ ನಿರ್ಮಾಣವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *