ಸೋತು ಎರಡು ವರ್ಷದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟ ಸಂತೋಷ್ ಲಾಡ್

Public TV
2 Min Read

ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಆತ್ಮಾವಲೋಕನ ಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಿತ್ತು. ಹೀಗಾಗಿ ಎರಡು ವರ್ಷ ಬಂದಿರಲಿಲ್ಲ. ಆದರೆ ಈ ಕ್ಷೇತ್ರದ ಜನರನ್ನು ಯಾವತ್ತೂ ಮರೆತಿಲ್ಲ. ಮರೆಯೋದು ಇಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

ತಾಲೂಕಿನ ಮಡಕಿಹೊನ್ನಿಹಳ್ಳಿಯ ತಮ್ಮ ಅಮೃತ ನಿವಾಸದಲ್ಲಿ ನಡೆದ ಕಾರ್ಯಕರ್ತ ಸಭೆ ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಹಿಂದಿನ 10 ವರ್ಷಗಳ ಕಾಲ ತಾಲೂಕಿನಲ್ಲಿ ಬೇಡ್ತಿ ಹಳ್ಳದ ನೀರಾವರಿ ಯೋಜನೆ, ಡಿಪೋ ಕಾಮಗಾರಿ, ರೈತರಿಗೆ ಕೊಳವೆ ಬಾವಿ, ಹೊಸ ವಿದ್ಯುತ್ ತಂತಿ ಬದಲಾವಣೆ ಇನ್ನೂ ಹಲವಾರು ಜನಪರ ಯೋಜನೆ ಕೈಗೊಂಡಿದ್ದು, ನನಗೆ ತೃಪ್ತಿ ಇದೆ ಎಂದರು.

ಸುಮಾರು 50 ಕೋಟಿ ರೂ. ಸ್ವಂತ ಹಣವನ್ನು ಕ್ಷೇತ್ರಕ್ಕೆ ಖರ್ಚು ಮಾಡಿದ್ದೇನೆ. ನಾನು ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ, ಜನರ ಸೇವೆ ಮಾಡಲು ಬಂದವನು. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ರಾಜಕೀಯವಾಗಿ ಪುನರಜನ್ಮ ನೀಡಿದ ಕಲಘಟಗಿ ಕ್ಷೇತ್ರದ ಜನರ ಋಣವನ್ನ ಮರೆಯುವುದಿಲ್ಲ. ಕಲಘಟಗಿಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಕಾಂಗ್ರೆಸ್‍ನಲ್ಲಿ ನಾಗರಾಜ ಛಬ್ಬಿ ಬಣ ಹಾಗೂ ಲಾಡ್ ಎರಡು ಬಣಗಳಿವೆ ಎಂಬುದು ಸುಳ್ಳು. ಇರುವುದೊಂದೇ ಕಾಂಗ್ರೆಸ್. ನಾಗರಾಜ ಛಬ್ಬಿ ನನ್ನ ಆತ್ಮೀಯ ಸ್ನೇಹಿತ. ಆತನಿಗೂ ಶಾಸಕರಾಗುವ ಆಸೆ ಇದೆ, ಆತನಿಗೆ ಒಳ್ಳೆಯದಾಗಲಿ. ಪಕ್ಷದ ಸಂಘಟನೆಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ವಿನಯ್ ಕುಲಕರ್ಣಿ, ಶ್ರೀನಿವಾಸ್ ಮಾನೆ, ನಾಗರಾಜ ಛಬ್ಬಿ, ಇಸ್ಮಾಯಲ್ ತಮಟಗಾರ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ನನ್ನ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಪಕ್ಷ ಕಟ್ಟಿ ಬೆಳಸುವುದು ಅಷ್ಟೇ ಈಗಿರುವ ಉದ್ದೇಶ. ನಾನು ಇನ್ನು ಮುಂದೆ ಜನರು ಹಾಗೂ ಕಾರ್ಯಕರ್ತರನ್ನು ಭೇಟಿ ಕೊಡುತ್ತಾ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತೇನೆ. ಈಗಿರುವ ಶಾಸಕ ಸಿಎಂ ನಿಂಬಣ್ಣವರ್ ಬೇಗ ಗುಣಮುಖರಾಗಲಿ ಎಂದು ಆಶಿಸಿದರು. ನಂತರ ಶಾಸಕರ ಸಿಎಂ ನಿಂಬಣ್ಣವರ ಭೇಟಿ ಮಾಡಿ ಅವರ ಆರೋಗ್ಯ ಕೂಡ ವಿಚಾರಿಸಿದರು.

Share This Article
Leave a Comment

Leave a Reply

Your email address will not be published. Required fields are marked *