ಸೈನಿಕರ ಪ್ರಾಣ ತ್ಯಾಗದಿಂದಾಗಿ ಅತೀವ ನೋವು, ದೇಶ ಅವರ ತ್ಯಾಗವನ್ನು ಎಂದೂ ಮರೆಯಲ್ಲ- ರಾಜನಾಥ್ ಸಿಂಗ್

Public TV
2 Min Read

ನವದೆಹಲಿ: ಪೂರ್ವ ಲಡಾಖ್‍ನಲ್ಲಿ ನಡೆದ ಚೀನಾ ಹಾಗೂ ಭಾರತದ ನಡುವಿನ ಸಂಘರ್ಷದಲ್ಲಿ 20 ಸೈನಿಕರು ಹುತಾತ್ಮರಾಗಿರುವುದು ಅತೀವ ನೋವುಂಟು ಮಾಡಿದೆ. ದೇಶ ಅವರ ತ್ಯಾಗವನ್ನು ಎಂದೂ ಮರೆಯುವುದಿಲ್ಲ ಎಂದು ರಕ್ಷಾಣ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪೂರ್ವ ಲಡಾಖ್‍ನ ಗಲ್ವಾನ್ ಪ್ರದೇಶದಲ್ಲಿ ಸೈನಿಕರು ಹುತಾತ್ಮರಾಗಿರುವುದು ಅತೀವ ನೋವುಂಟು ಮಾಡಿದೆ. ನಮ್ಮ ಸೈನಿಕರು ಕರ್ತವ್ಯ ನಿರ್ವಹಿಸುವುದರಲ್ಲಿ ಮಾದರಿಯಾಗಿದ್ದಾರೆ. ದೇಶದ ಘನತೆ, ಗೌರವವನ್ನು ಎತ್ತಿ ಹಿಡಿಯುವ ವಿಚಾರದಲ್ಲಿ ಸಾಹಸ ಮೆರೆದಿದ್ದಾರೆ. ಪ್ರಾಣಕ್ಕಿಂತ ದೇಶ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಇಂತಹ ಕಠಿಣ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬ ಜೊತೆ ದೇಶ ಇರುತ್ತದೆ. ಅವರ ತ್ಯಾಗವನ್ನು ದೇಶ ಎಂದೂ ಮರೆಯುವುದಿಲ್ಲ. ಹುತಾತ್ಮ ಯೋಧರ ಕಟುಂಬದ ಕಷ್ಟಕ್ಕೆ ನನ್ನ ಹೃದಯ ಮಿಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ಇಡೀ ದೇಶವೇ ಹೆಗಲಿಗೆ ಹೆಗಲು ಕೊಟ್ಟು ಅವರ ಜೊತೆ ನಿಲ್ಲುತ್ತದೆ. ಅವರ ತ್ಯಾಗ ಬಲಿದಾನದ ಕುರಿತು ನಮಗೆ ಹೆಮ್ಮೆಯಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಜೂನ್ 15 ಹಾಗೂ 16ರಂದು ನಡೆದ ದಾಳಿಯಲ್ಲಿ 17 ಭಾರತೀಯ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ಒಟ್ಟು 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ ಚೀನಾದ 43 ಸೈನಿಕರು ಸಹ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *