ಗದಗ/ಮಡಿಕೇರಿ: ಲಾಕ್ಡೌನ್ ಮೊದಲ ದಿನವಾದ ಇವತ್ತು ಪೊಲೀಸರು, ಅಧಿಕಾರಿಗಳು ಕೊರೊನಾ ಜಾಗೃತಿ ಮೂಡಿಸಿದರು. ಅನಾವಶ್ಯಕವಾಗಿ ರಸ್ತೆಗಿಳಿದಿದ್ದವರಿಗೆ ಎಚ್ಚರಿಕೆ ನೀಡಿದರು. ಗದಗ ಜಿಲ್ಲೆಯ ಗಜೇಂದ್ರಗಡ ಪಿಎಸ್ಐ ಗುರುಶಾಂತ್ ಸೈಕಲ್ ಏರಿ ಬರುವ ಮೂಲಕ ಬೈಕ್ ನಲ್ಲಿ ತಿರುಗಾಡುತ್ತಿದ್ದವರಿಗೆ ಜಾಗೃತಿ ಮೂಡಿಸಿದರು. ಇತ್ತ ಕೊಡಗಿನಲ್ಲಿ ಜಿಲ್ಲಾಧಿಕಾರಿಗಳು ರಸ್ತೆಗಿಳಿದು ಪರಿಶೀಲನೆ ನಡೆಸಿದರು.
ಪಿಎಸ್ಐ ಗುರುಶಾಂತ್ ತಮ್ಮ ವಾಹನ ಬದಿಗಿಟ್ಟು ಸೈಕಲ್ ಏರಿ, ಪಟ್ಟಣದ ತುಂಬೆಲ್ಲ ಸುತ್ತಾಡಿದರು. ನಗರದ ಕಾಲಕಾಲೇಶ್ವರ ಸರ್ಕಲ್, ದುರ್ಗಾ ಸರ್ಕಲ್, ಜೋಡು ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಸುತ್ತಾಡಿ ಕೊರೊನಾ ಬಗ್ಗೆ ತಿಳುವಳಿಕೆ ಮೂಡಿಸಿದ್ದಾರೆ. ಅನಗತ್ಯವಾಗಿ ಬೈಕ್ ಏರಿ ಬಂದವರನ್ನು ತಡೆದು ವಾಹನ ಸೀಜ್ ಮಾಡಿ ದಂಡ ವಿಧಿಸಿದರು.
ಕೊಡಗು ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ವತಃ ಫೀಲ್ಡಿಗಿಳಿದು ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ಮಾರುಕಟ್ಟೆ ರಸ್ತೆ, ಇಂದಿರಾಗಾಂಧಿ ವೃತ್ತ ಸೇರಿದಂತೆ ವಿವಿಧೆಡೆ ನಡೆದುಕೊಂಡೇ ಓಡಾಡಿ ನಗರದ ಸ್ಥಿತಿಯನ್ನು ಗಮನಿಸಿದರು. ಜೊತೆಗೆ ಎಸ್ಪಿ ಕ್ಷಮಾ ಮಿಶ್ರಾ ಕೂಡ ಓಡಾಡಿ ನಗರದ ಪರಿಸ್ಥಿತಿ ಪರಿಶೀಲಿಸಿದರು.
ಈ ವೇಳೆ ಕೆಲವು ಅಂಗಡಿಗಳ ಮುಂದೆ ಜನರು ಗುಂಪು ಗುಂಪಾಗಿ ನಿಂತಿದ್ದನ್ನು ಗಮನಿಸಿ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದರು. ಇನ್ನು ಎಸ್ಪಿ ಕ್ಷಮಾ ಮಿಶ್ರ ಪ್ರತಿಕ್ರಿಯಿಸಿ ಈಗಾಗಲೇ ಎಲ್ಲೂ ಅನಗತ್ಯವಾಗಿ ವಾಹನಗಳು ಓಡಾಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.